Tuesday, April 15, 2008

ಪರಮಾತ್ಮನ ಪರಿಚಯ - ಬ್ರಹ್ಮಕುಮಾರಿ ಮಾಲಾ (ಎಮ್.ಬಿ.ರಾಜಗೋಳಿ, ನಿವೃತ್ತ ಮುಖ್ಯೋಪಾಧ್ಯಾಯಿನಿ), ಯರಡಾಲ.


ಪ್ರಕಾಶ ಅವರ ಸೊದರತ್ತೆಯವರಾದ ಶ್ರೀಮತಿ ಎಮ್.ಬಿ. ರಾಜಗೋಳಿ ಇವರು ಗೋಕಾಕ್ ತಾಲೂಕಿನ ಬಡಿಗವಾಡ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಮಾತೆಯಾಗಿ ಕಳೆದ ಕೆಲವೇ ವರ್ಷಗಳ ಹಿಂದೆ ನಿವೃತ್ತರಾಗಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಕ್ರಿಯ ಸದಸ್ಯರಾಗಿರುವ ಇವರು ಪರಮಪಿತ ಶಿವನ ಬಗ್ಗೆ ಜನಜಾಗೃತಿ ಮೂಡಿಸಲು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.


ಇದೇನು ಹೊಸ ಮಾತಲ್ಲ. ಯಾರಿಗೆ ಪರಮಾತ್ಮನ ಪರಿಚಯ ಇಲ್ಲ ಮತ್ತು ಯಾರಿಗೆ ಗೊತ್ತಿಲ್ಲ. ಪರಮಾತ್ಮ ಅಂದರೆ ಕೊರಳಲ್ಲಿ ರುದ್ರಾಕ್ಷಿ ಸರ, ಜಡೆಯಲ್ಲಿ ಗಂಗೆ, ಕೈಯಲ್ಲಿ ತ್ರಿಶೂಲ, ಕೊರಳಿಗೆ ಸುತ್ತಿದ ಹಾವು, ಹುಲಿ ಚರ್ಮದ ಉಡುಗೆ ಪಕ್ಕದಲ್ಲಿ ಪಾರ್ವತಿ ಜೊತೆಗೆ ಗಣಪತಿ. ಈತನೆ ಪರಮಾತ್ಮ ಎನ್ನುತ್ತಾರೆ. ಬೇರೆ ಬೇರೆ ದೇವಾಲಯಗಳಿಗೆ ಹೋಗಿ ಹನುಮಾನ್, ಕೃಷ್ಣ, ಲಕ್ಷ್ಮಿ ಇವರುಗಳನ್ನು ದೇವರು ಎನ್ನುತ್ತಾರೆ. ಕಲ್ಲು, ಮಣ್ಣು, ಕಟ್ಟಿಗೆ ಮುಂತಾದವುಗಳಿಂದ ಮಾಡಿದ ಮೂರ್ತಿಗಳನ್ನು ದೇವರು ಎನ್ನುತ್ತಾರೆ. ಮಸೀದೆಗಳಿಗೆ ಹೋಗಿ ಪ್ರಾರ್ಥನೆ ಮಾಡಿ ಅಲ್ಲಾಹುವನ್ನು ದೇವರು ಎನ್ನುತ್ತಾರೆ. ಚರ್ಚುಗಳಿಗೆ ಹೋಗಿ ಪ್ರಾರ್ಥನೆ ಮಾಡಿ ಕ್ರಿಸ್ತನನ್ನು ದೇವರು ಎನ್ನುತ್ತಾರೆ. ಗುರುದ್ವಾರಗಳಿಗೆ ಹೋಗಿ ಗ್ರಂಥಸಾಹಿಬ್ ಪಠಣ ಮಾಡಿ ಗುರುನಾನಕನನ್ನು ದೇವರು ಎನ್ನುತ್ತಾರೆ. ಅಹಿಂಸಾ ಪರಮೋಧರ್ಮ ಎಂದು ಹೇಳಿದ ಮಹಾವೀರನನ್ನು, ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದ ಬುದ್ಧನನ್ನು, ಕಾಯಕವೇ ಕೈಲಾಸ ಎಂದು ಹೇಳಿದ ಬಸವಣ್ಣನನ್ನು, ವಿವಿಧ ಸಿದ್ಧಾಂತ ಬೋಧಿಸಿದ ಆಚಾರ್ಯರನ್ನು, ಮಠಾಧಿಪತಿಗಳನ್ನು, ಸಂತರನ್ನು, ಸಾಧುಗಳನ್ನು ದೇವರೆನ್ನುತ್ತಾರೆ. ಹಾಗಾದರೆ ಇವರೆಲ್ಲರೂ ದೇವರಾ? ನಿಜವಾದ ದೇವರು ಯಾರು? ಆ ನಿಜವಾದ ಸತ್ಯವಾದ ಪರಮಪಿತ ಪರಮಾತ್ಮನ ಪರಿಚಯವನ್ನು ಸಂಕ್ಷಿಪ್ತವಾಗಿ ಮಾಡಿಕೊಳ್ಳೋಣ ಬನ್ನಿ.
ಪರಮಪಿತ ಪರಮಾತ್ಮ ಎಂದರೆ ಈತನಿಗೆ ಯಾವ ತಂದೆ ತಾಯಿ ಇಲ್ಲ. ಈತನು ಯಾರ ಗರ್ಭದಿಂದಲೂ ಹುಟ್ಟಿಲ್ಲ. ಈತನಿಗೆ ಶರೀರ ಇಲ್ಲ. ಈತನು ಅಭೋಕ್ತ, ಅಯೋನಿಜ, ಅಶರೀರಿ, ಅಕಾಲ, ಜನನ ಮರಣ ರಹಿತ, ಧರ್ಮ-ಜಾತಿ-ವರ್ಣ-ವರ್ಗಬೇಧ ರಹಿತ ಜ್ಯೋತಿರ್ಬಿಂದು ಪರಮಾತ್ಮ ಸದಾ ಪವಿತ್ರ. ಈತನ ಹೆಸರು ಶಿವ. ಶಿವ ಎಂದರೆ ಸದಾ ಕಲ್ಯಾಣಕಾರಿ, ಮಂಗಳಕಾರಿ, ಶುಭಕಾರಿ. ದುಃಖ ದೂರ ಮಾಡಿ ಸುಖ ಕೊಡುವವನು. ದೇವರಿಗೆ ಹೆದರುವ ಕಾರಣ ಇಲ್ಲ. ಪರಮಾತ್ಮ ಆನಂದಸಾಗರ, ದಯಾಸಾಗರ, ಪ್ರೇಮಸಾಗರ. ಸಮುದ್ರದ ನೀರನ್ನೆಲ್ಲ ಮಸಿ (ಇಂಕ್) ಮಾಡಿ, ಆಕಾಶವನ್ನೆ ಹಾಳೆ (ಪೇಪರ್) ಮಾಡಿ, ಗಿಡಗಂಟಿಗಳನ್ನೆಲ್ಲ ಲೇಖನಿ (ಪೆನ್) ಮಾಡಿ ಬರೆದರೂ ಆತನ ಮಹಿಮೆ ತೀರುವದಿಲ್ಲ.
ಹಾಗಾದರೆ ಪರಮಾತ್ಮ ಜ್ಯೋತಿರ್ಬಿಂದು ಎಂದ ಹಾಗಾಯಿತು. ಈ ಜ್ಯೋತಿರ್ಬಿಂದು ಪರಮಾತ್ಮನ ಸ್ಥಾನ ಎಲ್ಲಿದೆ, ಆತ ಮಾಡುವ ಕೆಲಸವೇನು, ಯಾವಾಗ ಭೂಮಿಗೆ ಬರುತ್ತಾನೆ, ಹೇಗೆ ಬರುತ್ತಾನೆ, ಯಾರ ಮುಖಾಂತರ ತನ್ನ ಪರಿಚಯ ತಿಳಿಸುತ್ತಾನೆ. ಪರಮಾತ್ಮ ಎಂದರೆ ಇಡೀ ವಿಶ್ವಕ್ಕೆ ತಂದೆ ಆಗಿದ್ದಾರೆ.
ಭಕ್ತಿಯಿಂದ ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್ ಎನ್ನುತ್ತಾರೆ ಇದರ ಅರ್ಥ ಏನು? ರಾಮ ರಾಜ್ಯ ರಾವಣ ರಾಜ್ಯಗಳ ಬಗ್ಗೆ ಮಾತಾಡುತ್ತಾರೆ ಇವು ಯಾವಾಗ ಇದ್ದವು? ಭಾರತದಲ್ಲಿ ಬಂಗಾರದ ಪಕ್ಷಿ ಇತ್ತಂತೆ ಹೌದೆ? ಶಿವನ ಜಯಂತಿ ಆಚರಿಸುತ್ತಾರೆ ಏಕೆ? ಆಗಿ ಹೋದ ನಾಲ್ಕು ಯುಗಗಳ ಬಗ್ಗೆ ಈಗಿರುವ ಕಲಿಯುಗದ ಬಗ್ಗೆ ಹೇಳುತ್ತಾರೆ ಅವೆಲ್ಲ ಏನು? ಹೆಣ್ಣು ದೇವತೆಗಳಿಗೆ ಹುಲಿ ಸಿಂಹಗಳೇ ಏಕೆ ವಾಹನಗಳು? ಶಿವಲಿಂಗದ ಮುಂದೆ ನಂದಿಯೇ ಏಕೆ? ಶಿವನಿಗೆ ತ್ರಿದಳವೆ (ಪತ್ರಿ) ಏಕೆ ಪ್ರೀತಿ? ಶಿವಭಕ್ತರು ವಿಭೂತಿಯನ್ನೇ ಏಕೆ ಧರಿಸಬೇಕು? ವಿಷ್ಣು ಭಕ್ತರು ನಾಮವನ್ನೇ ಏಕೆ ಹಚ್ಚಬೇಕು? ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ನಾವೇಕೆ ತಿಳಿದುಕೊಂಡಿಲ್ಲ. ನಾನು ಯಾರು? ಎಲ್ಲಿಂದ ಬಂದೆ? ಯಾಕೆ ಬಂದೆ? ಎಲ್ಲಿಗೆ ಹೋಗಬೇಕು? ಹಿಂದೆ ಎಷ್ಟು ಜನ್ಮಗಳನ್ನು ಪಡೆದೆ? ಮುಂದೆ ಎಷ್ಟು ಜನ್ಮಗಳನ್ನು ಪಡೆಯಲಿದ್ದೇನೆ? ಈ ನಿರಂತರ ಜನನ ಮರಣಗಳಿಗೆ ಕೊನೆ ಇದೆಯೆ? ಮುಕ್ತಿ ಎನ್ನುವದೊಂದು ಇದೆಯೆ?
ಬರೀ ನದಿಗೆ ಹೋಗಿ ಜಳಕ ಮಾಡಿ ದೇಹ ಶುದ್ಧಿ ಮಾಡಿಕೊಂಡರಾಯಿತೆ? ಹಸಿವಾದಾಗ ಊಟ ಮಾಡಿದರಾಯಿತೆ? ಈ ಶರೀರದ ಹಣೆಯ ಮಧ್ಯದಲ್ಲಿ ಜ್ಯೋತಿಸ್ವರೂಪ ಆತ್ಮ ಇದೆ. ಅದೇ ಜೀವ. ಈ ಜೀವಕ್ಕೆ ಊಟ ಯಾವಾಗ ಸಿಗುತ್ತದೆ ಅಂದರೆ ಪರಮಪಿತ ಪರಮಾತ್ಮನನ್ನು ನೆನಪು ಮಾಡಿಕೊಂಡಾಗ. ನಾವು ಪರಮಾತ್ಮನನ್ನು ಎಷ್ಟು ಪ್ರೀತಿಯಿಂದ ನೆನಪು ಮಾಡಿಕೊಳ್ಳುತ್ತೇವೆಯೊ ಅಷ್ಟು ನಮ್ಮ ಆತ್ಮ ಶಕ್ತಿಶಾಲಿಯಾಗುತ್ತದೆ, ಖುಷಿಯಿಂದ ಸಂತೋಷದಿಂದ ಇರುತ್ತದೆ. ಜ್ಞಾನ ಬೇರೆ, ವಿಜ್ಞಾನ ಬೇರೆ, ಅಜ್ಞಾನ ಬೇರೆ. ಚಿಂತೆ ಬೇರೆ, ಚಿತೆ ಬೇರೆ ಅಂತರ ಬಿಂದು ಮಾತ್ರ. ಹಾಗೆಯೆ ಒಂದು ದೀಪಕ್ಕೆ ಎಣ್ಣೆ ಇಲ್ಲ ಅಂದರೆ ಹ್ಯಾಗೆ ಅದು ಮಂದವಾಗುತ್ತದೋ ಕಡಿಮೆ ಪ್ರಕಾಶ ಕೊಡುತ್ತದೋ ಅದೇ ರೀತಿ ಆತ್ಮವೆಂಬ ಜ್ಯೋತಿರ್ಬಿಂದುವಿಗೆ ಪರಮಾತ್ಮನ ನೆನಪು ಕಡಿಮೆ ಮಾಡಿದರೆ ಶಕ್ತಿ ಕುಂದುತ್ತದೆ. ನೆನಪು ಹೆಚ್ಚು ಮಾಡಿದಂತೆಲ್ಲ ಶಕ್ತಿ ಹೆಚ್ಚುತ್ತದೆ. ಆಗ ಆತ್ಮ ಜ್ಯೋತಿ ಪ್ರಕಾಶಮಾನವಾಗಿ ಹೊಳೆಯುತ್ತದೆ.
ಶಿವನಿಗೆ ಸತ್ಯಂ ಶಿವಂ ಸುಂದರಂ ಎಂದು ಹೇಳುತ್ತಾರೆ. ಗಾಂಧೀಜಿ ಕೇವಲ ಶಾಂತಿಗಾಗಿ ಪ್ರಾರ್ಥನೆ ಮಾಡಿದರು. ಅವರು ಮಹಾತ್ಮರೇನೋ ಅನ್ನಿಸಿಕೊಂಡರು ಆದರೆ ನಿಜವಾದ ಪರಮಾತ್ಮನ ಬಗ್ಗೆ ಅವರು ತಿಳಿಯಲಿಲ್ಲ.
ಹಾಗಾದರೆ ನಾವು ಹೇಳುವ ಪರಮಪಿತ ಪರಮಾತ್ಮ ಯಾವ ಯುಗದಲ್ಲಿ ಮತ್ತು ಯಾವಾಗ ಈ ಧರೆಗೆ ಬರುತ್ತಾನೆ? ಈಗ ನಾವಿರುವ ಸಂಗಮಯುಗದಲ್ಲಿ ನಾವು ಪರಮಾತ್ಮನ ನೆನಪು ಮಾಡಿಕೊಳ್ಳುವದರಿಂದ ಮುಂದೆ ಬರುವ ಸತ್ಯ ಯುಗದಲ್ಲಿ ದೇವತಾ ಪದವಿ ಪಡೆಯುತ್ತೇವೆ. ಹೀಗಿರುವ ಪರಮಾತ್ಮನನ್ನು ನೆನಪು ಮಾಡಿಕೊಳ್ಳುತ್ತ ಆ ಪರಮಾತ್ಮನಿಂದ ಸಿಗುವ ಆಸ್ತಿಗೆ ಅಧಿಕಾರಿ ಆಗೋಣ.

ಎಲ್ಲರಿಗೂ ಶುಭವಾಗಲಿ.

ಓಂ ಶಾಂತಿ .

No comments: