Wednesday, April 02, 2008

ನಾವು..ಮತ್ತು ನಮ್ಮ ನಂಬಿಕೆಗಳು - ಅರುಣ ಆರ್. ಯಾದವಾಡ, ಬೆಂಗಳೂರು.

ನಮ್ಮ ಕಡೆ ಉತ್ತರ ಕರ್ನಾಟಕದಲ್ಲಿ ಕೆಲವು ನಂಬಿಕೆಗಳು ಪ್ರಚಲಿತದಲ್ಲಿವೆ.ಇಂಥ ನಂಬಿಕೆಗಳು ಜಗತ್ತಿನ ಎಲ್ಲಾ ಭಾಗಗಳಲ್ಲಿ ಇರಬಹುದು..ಇರುತ್ತವೆ. ಇವು ಮೂಢ ನಂಬಿಕೆಗಳೊ ಅಥವಾ ರೂಢ ನಂಬಿಕೆಗಳೊ ಎಂಬುದರ ಬಗ್ಗೆ ಇಲ್ಲಿ ಚರ್ಚೆ ಇಲ್ಲ.ಆದರೆ ಇಂಥ ಎಲ್ಲಾ ನಂಬಿಕೆಗಳನ್ನೇ ಅನುಸರಿಸಿಕೊಂಡೇ ನಾವೆಲ್ಲಾ ಬೆಳೆದು ಬಂದಿದ್ದೇವೆ. ಈಗ ತಿರುಗಿ ನೋಡಿದರೆ ಎಷ್ಟೊಂದು ಆಶ್ಚರ್ಯವಾಗುತ್ತದೆ. ಎಷ್ಟೊ ಸಲ ನಾವು ಯಾವುದನ್ನೂ ಪ್ರಶ್ನೆ ಮಾಡದೆಯೇ ಹಾಗೆಯೇ ಅನುಸರಿಸಿಕೊಂಡು ಬಂದಿದ್ದೇವೆ. ಇಂಥ ವಿಷಯಗಳ ಕಡೆಗೆ ಇದೊಂದು ಅಚ್ಚರಿಯ ನೋಟ.
೧. ಸಂಜೆ ಆದ ಮೇಲೆ ಹುಣಿಸೆ ಹಣ್ಣು ತಿನ್ನಬಾರದು.
೨. ಸಂಜೆ ಆದ ಮೇಲೆ ಉಗುರು ಕತ್ತರಿಸಿಕೊಳ್ಳಬಾರದು.
೩. ಸಂಜೆ ಆದ ಮೇಲೆ 'ಉಪ್ಪು' ಎನ್ನುವ ಶಬ್ದ ಉಪಯೋಗಿಸಬಾರದು. ಅದರ ಬದಲು "ಸಕ್ಕರೆ" ಅಥವಾ "ಋತಿ"
ಅನ್ನುವ ಶಬ್ದಗಳನ್ನು ಉಪಯೋಗಿಸಬಹುದು.
೪. ಸಂಜೆ ಹೊತ್ತಿನಲ್ಲಿ ಎಲ್ಲರೂ ಮಾತನಾಡುತ್ತ ಕುಳಿತಾಗ ಹಲ್ಲಿ ನುಡಿದರೆ ಆ ಮಾತು ಸತ್ಯವಾಗುತ್ತದೆ.
೫. ಮನೆಯಲ್ಲಿ ಯಾರಿಗಾದರೂ ಬಿಕ್ಕಳಿಕೆ ಬಂದರೆ , ಅವರನ್ನು ಯಾರೋ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಅರ್ಥ.
೬. ಮನೆಯ ಮಾಳಿಗೆ ಮೇಲಿನ ಕಾಗೆ ಸ್ವಲ್ಪ ಜಾಸ್ತಿ ಹೊತ್ತು ಕಾ ಕಾ ಅಂತಾ ಕೂಗಿದರೆ ಊ ರಿನಿಂದ ಯಾರೋ ಬರುತ್ತಾರೆ ಅಂತಾ ಅರ್ಥ.
೭. ಮನೆಯಲ್ಲಿ ಆಕಸ್ಮಿಕವಾಗಿ ಹಂದಿಯೊಂದು ಒಳ ಬಂದರೆ ಅದು ವಿಷ್ಣು ದೇವತೆ ಮನೆಯೊಳಗೆ ಬಂದಂತೆ.
೮. ಮನೆಯಲ್ಲಿ 'ಆಸ್ತಿಕ ದುರಾಯಿ' ಅಂತಾ ಬರೆದರೆ ಹಾವು, ಹುಳು, ಹುಪ್ಪಡಿ ಇತ್ಯಾದಿ ಮನೆಯಲ್ಲಿ ಬರುವದಿಲ್ಲ.
೯. ಮನೆಯಲ್ಲಿ ದೋಸೆ ಮಾಡಿದರೆ, ಮೊದಲನೇ ದೋಸೆಯನ್ನು ಮನೆಯ ಹಿರಿಯ ಮಗ/ಮಗಳ ಬೆನ್ನಿಗೆ ಮೆಲ್ಲಗೆ ತಟ್ಟಿ ಮನೆಯ ಮಾಳಿಗೆಯ ಮೇಲೆ ಚೆಲ್ಲಬೇಕು.
೧೦. ಮನೆಯಲ್ಲಿ ಅಡುಗೆ ಮಾಡುವಾಗ ಮೊದಲು ಮಾಡಿದ ಬಿಸಿ ರೊಟ್ಟಿಯನ್ನು ಮನೆಯ ಮೊದಲ ಮಗನಿಗೆ ಬಡಿಸಬಾರದು. ಹಾಗೆಯೇ ಕೊನೆಗೆ ಮಾಡಿದ ರೊಟ್ಟಿಯನ್ನು ಕೊನೆಯ ಮಗನಿಗೆ ಬಡಿಸಬಾರದು.

೧೧. ಮನೆಯಲ್ಲಿ ಕೊನೆಯ ಮಗನ ಮದುವೆಯನ್ನು ಕೊನೆಗೆ ಮಾಡಬಾರದು.
೧೨. ಮನೆಯ ಮುಖ್ಯ ದ್ವಾರದ ಹೊಸ್ತಿಲಿನ ಮೇಲೆ ಶೀನಬಾರದು. ಹಾಗೆ ಮಾಡಿದ್ದೇ ಆದಲ್ಲಿ ಹೊಸ್ತಿಲಿಗೆ ಹಾಗೂ ಚೌಕಟ್ಟಿನ ಮೇಲ್ಭಾಗಕ್ಕೆ ನೀರು ಚಿಮುಕಿಸಿ ಮಡಿ ಮಾಡಬೆಕು.
೧೩. ಹೊಸ ಮನೆಯ ಗೃಹಪ್ರವೇಶದ ದಿನ ಮನೆಯೊಳಗೆ ಕರೆ ತಂದ ಆಕಳು ಮನೆಯಲ್ಲಿ ಸಗಣಿ ಹಾಕಿದರೆ ಅಥವಾ ಮೂತ್ರ ಮಾಡಿದರೆ ಅದು ಶುಭ ಸಂಕೇತ. ಅಡುಗೆ ಮನೆಯೊಳಗೆ ಮಾಡಿದರಂತೂ ಅದು ಇನ್ನೂ ಉತ್ತಮ.
೧೪. ಹೊರಗಡೆ ಹೋಗುವಾಗ ಮುಖ್ಯ ದ್ವಾರದ ಚೌಕಟ್ಟು ತಲೆಗೆ ಬಡಿದರೆ, ಹೊರಗೆ ಹೋಗಬಾರದು. ಸ್ವಲ್ಪ ಹೊತ್ತು ಒಳಗೆ ಕುಳಿತು ನೀರು ಕುಡಿದು ಆಮೇಲೆ ಹೋಗಬೇಕು.
೧೫. ಮನೆಮಗಳು ತಲೆದಿಂಬಿನ ಮೇಲೆ ಕುಳಿತಿದ್ದರೆ ಅವಳ ಅಪ್ಪ ಸಿಕ್ಕಾ ಪಟ್ಟೆ ಸಾಲ ಮಾಡುತ್ತಾನೆ.
೧೬. ಮಂಗಳವಾರ ಹಾಗೂ ಶುಕ್ರವಾರ ದಿನ ಮನೆಯಲ್ಲಿ ಸ್ತ್ರೀಯರು ದುಃಖಿಸಿದರೆ ಒಳ್ಳೆಯದಾಗುವದಿಲ್ಲ.
೧೭. ತುಂಬಿದ ಕೊಡ ಹೊತ್ತುಕೊಂಡು ಮುತ್ತೈದೆಯೊಬ್ಬಳು ಎದುರಿಗೆ ಬಂದರೆ ಅದು ಶುಭ ಸೂಚನೆ.
೧೮. ಪುರುಷರಿಗೆ ಬಲಗಣ್ಣು ಹಾಗೂ ಸ್ತ್ರೀಯರಿಗೆ ಎಡಗಣ್ಣು ಹಾರಿದರೆ ಒಳ್ಳೆಯದು.
೧೯. ಶವಯಾತ್ರೆಯೊಂದು ಎದುರಿಗೆ ಬಂದರೆ ಅದು ಶುಭ ಸೂಚನೆ.
೨೦. ರಾತ್ರಿ ಹೊತ್ತು ನಾಯಿ ಅಳುತ್ತಿದ್ದರೆ ಅದು ಏನೋ ಅಶುಭದ ಸಂಕೇತ.
೨೧. ಶ್ರಾವಣ ಮಾಸದಲ್ಲಿ ಹೇರ್ ಕಟ್/ಶೇವಿಂಗ್ ಮಾಡಿಸಿಕೊಳ್ಳಬಾರದು.
೨೨. ದಾರಿಯಲ್ಲಿ ಲಿಂಬೆ ಹಣ್ಣು ಕಂಡರೆ , ಅದನ್ನು ದಾಟಿ ಹೋಗಬಾರದು.
೨೩. ನಿಮ್ಮ ಹುಟ್ಟಿದ ದಿನ ಅಥವಾ ಅಮವಾಸ್ಯೆಯ ದಿನ ಹೇರ್ ಕಟ್ ಮಾಡಿಸಿಕೊಳ್ಳಬಾರದು.
೨೪. ಮೈ ಮೇಲೆ ಆಕಸ್ಮಾತ್ ಹಲ್ಲಿ ಬಿದ್ದರೆ ಕೂಡಲೆ ಬೇವಿನ ಮರ ನೋಡಬೆಕು.
೨೫. ಗರ್ಭಿಣಿ ಹೆಣ್ಣು ಮಗಳು ಯಾವದೇ ಹಾವನ್ನು ನೋಡಿದರೆ ಅದು ಕುರುಡು ಆಗುತ್ತದೆ.
೨೬. ಗರ್ಭಿಣಿ ಹೆಣ್ಣು ಮಗಳು ನದಿ, ಪರ್ವತಗಳನ್ನು ದಾಟಿ ಯಾವದೇ ಊ ರಿಗೆ ಪ್ರಯಾಣ ಬೆಳೆಸಬಾರದು.
೨೭. ಗರ್ಭಿಣಿ ಸ್ತ್ರೀಯರಲ್ಲಿ ಮಗುವಿನ ಅಲುಗಾಟ ಎಡಗಡೆಗೆ ಜಾಸ್ತಿ ಇದ್ದರೆ ಹೆಣ್ಣು ಮಗು ಆಗುತ್ತದೆ ಅಂತಾ ಭಾವನೆ.
೨೮. ಹೋಮ ನಡೆಸುವದನ್ನು ನೋಡುವದು ಗರ್ಭಿಣಿ ಸ್ತ್ರೀಯರಿಗೆ ನಿಷಿದ್ಧ.
೨೯. ಗರ್ಭಿಣಿ ಸ್ತ್ರೀಯರ ಮುಖದ ಬಣ್ಣ ಕಪ್ಪಗಾಗುತ್ತಿದ್ದರೆ ಅವರು ಗಂಡು ಮಗುವಿಗೆ ಜನ್ಮ ನೀಡುತ್ತಾರೆ.
೩೦. ಗರ್ಭಿಣಿ ಸ್ತ್ರೀಯರು ಗಾಯತ್ರಿ ಮಂತ್ರವನ್ನು ನುಡಿಯಬಾರದು. ಹಾಗೆ ಮಾಡಿದರೆ ಗರ್ಭಪಾತ ಆಗುವ ಸಂಭವ ಜಾಸ್ತಿ.
೩೧. ಇಬ್ಬರು ನಾದಿನಿಯರು ಗರ್ಭಿಣಿಯಾಗಿದ್ದರೆ ಪರಸ್ಪರ ನೋಡಬಾರದು ಹಾಗು ಒಂದೇ ಸಮಾರಂಭದಲ್ಲಿ ಭೆಟ್ಟಿ ಆಗಬಾರದು.
೩೨. ಮೂರು ಗಂಡು ಮಕ್ಕಳ ಮೆಲೆ ಒಂದು ಹೆಣ್ಣು ಮಗು ಆದರೆ ಅಥವಾ ಮೂರು ಹೆಣ್ಣು ಮಕ್ಕಳ ಮೇಲೆ ಒಂದು ಗಂಡು ಮಗು ಆಗುವದು ಒಳ್ಳೆಯದಲ್ಲ.
೩೩. ಗ್ರಹಣ ಸಮಯದಲ್ಲಿ ಮಕ್ಕಳು ಹುಟ್ಟಿದರೆ ಒಳ್ಳೆಯದಲ್ಲ. ಅದಕ್ಕೆ ಶಾಂತಿ ಮಾಡಿಸಬೇಕು.
೩೪. ಯಾರಿಗಾದರೂ ಮಕ್ಕಳು ಆಗದಿದ್ದರೆ ಇನ್ನೊಬ್ಬರ ಮನೆಯಲ್ಲಿನ ಗಣೇಶನ ಮೂರ್ತಿಯನ್ನು ಕಳವು ಮಾಡಿದರೆ ಮಗು
ಅಗುತ್ತದೆ.
೩೫. ಬೆಳಗಿನ ಜಾವ ಬರುವ ಕನಸುಗಳು ಸತ್ಯವಾಗುತ್ತವೆ.
೩೬. ಚಿಕ್ಕ ಮಕ್ಕಳು ಊಟ, ನೀರು ಬಿಟ್ಟು ಹಠ ಮಾಡುತ್ತಿದ್ದರೆ, ಕಾಲ್ದುಳಿ ಮಾಡಿ ದೃಷ್ಟಿ ತೆಗೆದರೆ ಸಮಸ್ಯೆ ಪರಿಹಾರವಾಗುತ್ತದೆ. (ಕಾಲ್ದುಳಿ ಅನ್ನುವದು ಮಕ್ಕಳು ಊಟ ಮಾಡದೇ ಅರ್ಧಕ್ಕೆ ಬಿಟ್ಟ ತಟ್ಟೆಯಲ್ಲಿ ಮಾಡುವ ಒಂದು ಸಣ್ಣ ಪ್ರಯೋಗ.)
೩೭. ಕೆಟ್ಟದ್ದನ್ನೇನನ್ನೋ ನೋಡಿ ಮಕ್ಕಳು ರಾತ್ರಿ ಹೊತ್ತು ಭಯ ಪಡುತ್ತಿದ್ದರೆ ಕಡಚಿಯನ್ನು ಒಲೆಯಲ್ಲಿ ಚೆನ್ನಾಗಿ ಕಾಯಿಸಿ, ನಂತರ ಅದನ್ನು ನೀರಲ್ಲಿ ಅದ್ದಿ ಹೊರತೆಗೆಯಬೇಕು. ಆ ನೀರು ಆರಿದ ಮೇಲೆ ಮಕ್ಕಳು ಕುಡಿದರೆ ರಾತ್ರಿ ಹೊತ್ತು ಯಾವದೇ ಭಯವಿಲ್ಲದೇ ನಿದ್ರಿಸುತ್ತವೆ. (ಕಡಚಿ ಅಂದರೆ ಚಪಾತಿ, ರೊಟ್ಟಿ ಇತ್ಯಾದಿಗಳನ್ನು ಹೆಂಚಿನ ಮೇಲೆ ಬೇಯಿಸುವಾಗ ಅವುಗಳನ್ನು ತಿರುವಿ ಹಾಕಲು ಉಪಯೋಗಿಸುವ ಸಾಧನ.)
೩೮. ಈರುಳ್ಳಿ, ಬದನೆಕಾಯಿ ಇತ್ಯಾದಿ ತರಕಾರಿಗಳನ್ನು ಯಾವದೇ ಅಂಗಡಿಯವನು ಕೈಯಲ್ಲಿ ತೂರುತ್ತಾ ತನ್ನ ಏರುತ್ತದೆ.
೩೯. ಆಕಸ್ಮಿಕವಾಗಿ ಯಾವದೇ ಹಾವೊಂದು ಯಾರದೇ ಎದೆಯ ಮೇಲೆ ಹಾಯ್ದು ದಾಟಿ ಹೋದರೆ, ಆ ವ್ಯಕ್ತಿಯು ಮುಂದೆ ಜೀವನದಲ್ಲಿ ರಾಜನಾಗುತ್ತಾನೆ ಅಥವಾ ಜೀವನದಲ್ಲಿ ವ್ಯಕ್ತಿಯಾಗುತ್ತಾನೆ.
೪೦. ಬೆಕ್ಕನ್ನು ಸಾಯಿಸುವದು ಮಹಾಪಾಪದ ಕೆಲಸ. ಆ ಪಾಪ ಆಮೇಲೆ ಚಿನ್ನದ ಬೆಕ್ಕನ್ನು ಮಾಡಿ ಪೂಜೆ ಮಾಡಿದರೂ
ಪರಿಹಾರವಾಗುವದಿಲ್ಲ.
೪೧. ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡ ಬಂದರೆ ಹೋದ ಕೆಲಸ ಸಾಧಿಸುವದಿಲ್ಲ.
೪೨. ಮೂರು ಜನ ಕೂಡಿ ಎಲ್ಲಿಯೂ ಹೊರಗೆ ಹೋಗಬಾರದು. ಹಾಗೆ ಹೋದರೆ ಅಂದುಕೊಂಡ ಕೆಲಸ ಆಗುವದಿಲ್ಲ.
ಹಾಗೆ ಹೊಗಲೇಬೇಕೆಂದಿದ್ದರೆ, ಜೊತೆಗೆ ಒಂದು ಕಲ್ಲನ್ನೊ ಇಲ್ಲ ಅಡಿಕೆಯನ್ನೊ ತೆಗೆದುಕೊಂಡು ಹೋಗಬೆಕು.
೪೩. ನೀವು ಯಾವುದೇ ಊ ರಿಗೆ ಹೋದರೆ, ೯ನೇ ದಿನ ಮರಳಿ ಪ್ರಯಾಣ ಮಾಡಬಾರದು.
೪೪. ಮಂಗಳವಾರ ದಿನ ಮಗಳನ್ನು (ಗಂಡನ ಮನೆಗೆ ಅಥವಾ ಇನ್ನಾವುದೇ ಮನೆಗೆ) ಹೊರಗೆ ಕಳಿಸಬಾರದು. ಹಾಗೆಯೇ
ಶುಕ್ರವಾರ ದಿನ ಸೊಸೆಯನ್ನು ಹೊರಗೆ ಕಳಿಸಬಾರದು.
೪೫. ದಕ್ಷಿಣ ದಿಕ್ಕಿಗೆ ತಲೆ ಮಾಡಿ ಮಲಗಕೂಡದು.
೪೬. ಮನೆಯಲ್ಲಿ ತೊಲೆಗಳ ಕೆಳಗೆ ಅಂದರೆ ಬೀಮ್‌ಗಳ ಕೆಳಗೆ ಮಲಗಕೂಡದು. ಹಾಗೆ ಮಾಡಿದರೆ ಕೆಟ್ಟ ಕನಸುಗಳು ಬೀಳುತ್ತವೆ.
೪೭. ಮಳೆರಾಯ ಬೇಗನೆ ಬರದೆ ಇದ್ದರೆ, ಕತ್ತೆ ಪೂಜೆ ಮಾಡಿದರೆ ಮಳೆ ಆಗುತ್ತದೆ.
೪೮. ಯಾರದರೂ ಹೊರಗಡೆ ಹೋಗುವಾಗ ಎಲ್ಲಿ ಹೋಗುತ್ತಿದ್ದಿರೆಂದು ಕೇಳಬಾರದು. ಹಾಗೆ ಕೇಳಿದರೆ, ಹೋದ ಕೆಲಸ
ಕೈಗೂಡುವದಿಲ್ಲ.
೪೯. ಕುಕ್ಕರುಗಾಲು ಹಾಕಿಕೊಂಡು ಕೈಯಲ್ಲಿ ತಟ್ಟೆ ಹಿಡಿದುಕೊಂಡು ಊ ಟ ಮಾಡುತ್ತಿದ್ದರೆ, ಎರಡು ಕಾಲುಗಳು ಅಥವಾ ಕಾಲ್ಬೆರಳುಗಳು ಕ್ರಾಸ್ ಆಗಿರಕೂಡದು. ಅದು ಅರಿಷ್ಟ ಅಥವಾ ಅವಲಕ್ಷಣದ ಸಂಕೇತ.
೫೦. ಚಿಕ್ಕ ಮಕ್ಕಳಲ್ಲಿ ಹಲ್ಲುಗಳು ಬಿದ್ದಾಗ ಹೊಸ ಹಲ್ಲು ಬೇಗ ಬರಲೆಂದು ಯಾರಿಗೂ ಕಾಣದ ಹಾಗೆ ಮನೆ ಮಾಳಿಗೆಯ
ಮೇಲೆ ಎಸೆಯಬೇಕು.
೫೧. ಶಿವರಾತ್ರಿ ಹಬ್ಬದ ದಿನ ಯಾರಾದರು ಸತ್ತರೆ (ಸಾಮಾನ್ಯ ಸಾವು) ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ.
೫೨. ನಿಮ್ಮ ಮನೆಯ ಹಿತ್ತಿಲಲ್ಲಿ ಬಾಳೆ ಗಿಡ ಬೆಳೆದಿದ್ದರೆ, ಅದು ಗೊನೆ ಬಿಡುವಾಗ ಮಾಡುವ ಸದ್ದು ಮನೆಯ ಮಂದಿ
ಕೇಳಿಸಿಕೊಳ್ಳುವದು ಒಳ್ಳೆಯದಲ್ಲ.
೫೩. ಬಿಲ್ವ ಪತ್ರಿ ಗಿಡವನ್ನು ಕೇವಲ ಸ್ವಾಮಿಗಳು ಅಂದರೆ ಜಂಗಮರು ಮಾತ್ರ (ಉದಾ: ಆನಂದ ಹಿರೇಮಠ, ಗಿರೀಶ ಮೆಟಗುಡ್ಡಮಠ ಅವರು) ತಮ್ಮ ಮನೆಗಳಲ್ಲಿಅಥವಾ ಮಠಗಳಲ್ಲಿ, ದೇವಸ್ಥಾನಗಳಲ್ಲಿ ನೆಡಬಹುದು. ಉಳಿದವರು ತಮ್ಮ ಮನೆಗಳಲ್ಲಿ ನೆಡುವ ಹಾಗಿಲ್ಲ.
೫೪. ಮನೆಯ ಹಿತ್ತಿಲಲ್ಲಿ ಯಾವುದೇ ಗಿಡಕ್ಕೆ ಜೇನು ಕಟ್ಟಿದರೆ ಒಳ್ಳೆಯ ಲಕ್ಷಣವಲ್ಲ.

No comments: