Tuesday, April 15, 2008

ಕ್ಷಣ ಕ್ಷಣ - ಪ್ರಕಾಶ ಸಿ ರಾಜಗೋಳಿ. ಬೆಂಗಳೂರು

ಸದ್ಯ ಬೆಂಗಳೂರಿನ ಐ.ಬಿ.ಎಮ್ ಇಂಡಿಯಾ ಸಂಸ್ಥೆಯಲ್ಲಿ ಎಸ್.ಏ.ಪಿ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಸ್ಯಾಪ್ ರಾಜ ಕನ್ನಡದಲ್ಲಿ ಲೇಖನ ಬರೆಯುವ ಪ್ರಮುಖ ಹವ್ಯಾಸ ಹೊಂದಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆಯಲ್ಲದೇ ಕೆಲ ಕಾರ್ಯಕ್ರಮಗಳು ಆಕಾಶವಾಣಿ ಧಾರವಾಡ ಮತ್ತು ಬೆಂಗಳೂರು ಕೇಂದ್ರಗಳಿಂದ ಪ್ರಸಾರಗೊಂಡಿವೆ. ದೀಪಾ ಅವರೊಂದಿಗೆ ವೈವಾಹಿಕ ಜೀವನ ನಡೆಸ್ಮತ್ತಿವ ರಾಜ್‌ಗೆ ಮಗ ದರ್ಶನ್ ಕಂಡರೆ ಇನ್ನಿಲ್ಲದ
ಸಂಭ್ರi .


ಪುರಾಣ ಪ್ರಸಂಗದಲ್ಲಿ ಸಮುದ್ರಮಥನ ನಡೆಯುವಾಗ ದೇವಾನುದೇವತೆಗಳೆಲ್ಲ ಅಮೃತಕ್ಕಾಗಿ ಹಾತೊರೆದರು... ಸೇವನೆ ಮಾಡಿದರು.... ಅಮರತ್ವ ಪಡೆದರು. ಆದರೆ ಸಮುದ್ರಮಥನದ ಬೈ ಪ್ರಾಡಕ್ಟ್ ಆದಂತಹ ಕಾರ್ಕೋಟಕ ವಿಷವನ್ನು ಏನು ಮಾಡುವದು ಎಂದು ದೇವಾನುದೇವತೆಗಳೆಲ್ಲ ಚಿಂತಾಕ್ರಾಂತರಾದ ಆ ಕ್ಷಣದಲ್ಲಿ ಭೋಳೆ ಶಂಕರ ಆ ವಿಷವನ್ನು ಆಪೋಷಣ ಮಾಡಲು ರೇಡಿಯಾಗದೇsss ಈ ಲೇಖನ ಬರೆಯಲು ನಾನಿರುತ್ತಿರಲಿಲ್ಲ!! ಓದಲು ನೀವಿರುತ್ತಿರಲಿಲ್ಲ!!! ಅಲ್ಲವೇ?
ಪ್ರಥಮವಂದ್ಯ ಗಣೇಶನ ಬುದ್ಧಿ ಸಾಮರ್ಥ್ಯವನ್ನು ಜಗತ್ತಿಗೆ ಸಾರಲು ಪರಮೇಶ್ವರ ಪಾರ್ವತಿಯರು ತಮ್ಮ ಮಕ್ಕಳಿಬ್ಬರಿಗೆ ವಿಶ್ವ ಪ್ರದಕ್ಷಿಣೆಯ ಸವಾಲು ಹಾಕಿದ ಆ ಕ್ಷಣದಲ್ಲಿ ಗಣಪತಿ ತನ್ನ ವಾಹನವಾದ ಇಲಿಯ ಇತಿಮಿತಿಗಳನ್ನರಿತು ಸರ್ವೇಶ್ವರ ಶಿವನ ಮತ್ತು ಆದಿಶಕ್ತಿ ಪಾರ್ವತಿಯರ ಸುತ್ತ ಸುತ್ತುವ ನಿರ್ಧಾರ ತೆಗೆದುಕೊಳ್ಳದೇ sss ಅಂದಿನಿಂದ ಇಂದಿನವರೆಗೆ ಗಣೇಶ ಬುದ್ಧಿಪ್ರದಾಯಕ ಎಂದೆನಿಸಿಕೊಳ್ಳುತ್ತಿರಲಿಲ್ಲವೇನೋ...
ರಾಮಾಯಣದಲ್ಲಿ ಸೀತೆಯು ತನಗೆ ಬಂಗಾರದ ಜಿಂಕೆ ಬೇಕು ಎಂದು ಆ ಕ್ಷಣದಲ್ಲಿ ಹಠ ಹಿಡಿಯದೇ sss ಮತ್ತು ಮೈದುನ ಲಕ್ಷ್ಮಣ ಹಾಕಿದ "ಲಕ್ಷ್ಮಣ ರೇಖೆ"ಯನ್ನು ಆ ಕ್ಷಣದಲ್ಲಿ ದಾಟದೇ ಇದ್ದಿದ್ದರೆ ರಾಮಾಯಣ ಯುದ್ಧವೇ ಆಗುತ್ತಿರಲಿಲ್ಲವೇನೋ.
ಮಹಾಭಾರತದಲ್ಲಿ ಮಯ ನಿರ್ಮಿತ ಅರಮನೆಯ ಚಮತ್ಕಾರಗಳಿಗೆ ಬಲಿಯಾಗಿ ದಾರಿ ಎಂದು ತಿಳಿದು ನೀರಲ್ಲಿ ಬಿದ್ದ ದುರ್ಯೋಧನನನ್ನು ನೋಡಿ ದ್ರೌಪದಿಯು ನಕ್ಕ ಕ್ಷಣದಲ್ಲಿ ಆತ ಅದು ತನ್ನ ಅತ್ತಿಗೆ ನಕ್ಕಿದ್ದಾಳೆ ಬಿಡು ಎಂದು ದೊಡ್ಡ ಮನಸ್ಸು sss.... ಇಡೀ ಮಹಾಭಾರತವೇ ನಡೆಯುತ್ತಿರಲಿಲ್ಲವೇನೋ.
ತನ್ನ ಸೋದರ ಸಂಬಂಧಿಗಳೊಂದಿಗೆ ಹೋರಾಡಲು ಅರ್ಜುನ ಕಪಟನಾಟಕ ಸೂತ್ರಧಾರಿ ಕೃಷ್ಣನ ಒಂದೇ ಮಾತಿಗೆ ತಕ್ಷಣವೇ ಒಪ್ಪಿ sss ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯ ರಚನೆಯೇ ಆಗುತ್ತಿರಲಿಲ್ಲವೇನೋ.
ಸಿಟ್ಟಿಗೆ ಹೆಸರಾದ ಜಮದಗ್ನಿ ಋಷಿಯು ತನ್ನ ಅರ್ಧಾಂಗಿ ಆದಿಶಕ್ತಿ ರೇಣುಕೆಯ ಮೇಲೆ ಕೋಪಗೊಂಡು ಆ ಕ್ಷಣದಲ್ಲಿ ಪರಶುರಾಮನಿಗೆ ಅವಳ ಶಿರಚ್ಛೇದದ ಆಜ್ಞೆ ನೀಡದೇ sss......... ಪರಶುರಾಮನ ಪಿತೃ ವಾಕ್ಯ ಪರಿಪಾಲನಾ ಮತ್ತು ಮೃತ ತಾಯಿಯನ್ನು ಮತ್ತೆ ಜೀವಂತಗೊಳಿಸಿಕೊಂಡ ನಿದರ್ಶನ ನಮ್ಮ ಮುಂದೆ ಇರುತ್ತಿರಲಿಲ್ಲವೇನೋ.
೧೨ ನೆಯ ಶತಮಾನದಲ್ಲಿ ನಡೆದ ಘಟನೆ: ನಗರ ವೀಕ್ಷಣೆಗೆ ಬಂದ ಮಂತ್ರಿ ಬಸವಣ್ಣನಿಗೆ ಅಂತ್ಯಜ ಡೋಹರ ಕಕ್ಕಯ್ಯ ಶರಣು ಎಂದಿದ್ದಕ್ಕೆ ಪ್ರತಿಯಾಗಿ ಬಸವಣ್ಣ ಶರಣು ಶರಣಾರ್ಥಿ ಎಂದಾಗ ಆ ಕ್ಷಣದಲ್ಲಿ ಆ ದಂಪತಿಗಳು ಮಾಡಿದ ಕಠೋರ
ನಿರ್ಧಾರ......... ಮತ್ತು ತನ್ಮೂಲಕ ಅವರ ದೇಹದ ಚರ್ಮದಿಂದ ತಯಾರಾದ ಪಾದುಕೆಗಳನ್ನು ಬಸವಣ್ಣ ಅವರ ಭಕ್ತಿಗೆ ಮೆಚ್ಚಿ ಆ ಕ್ಷಣದಲ್ಲಿ ತನ್ನ ತಲೆಯ ಮೇಲೆ ಇರಿಸಿಕೊಳ್ಳದೇ sss ಅಂತಹುದೊಂದು ಮಹಾನ್ ಘಟನೆಗೆ ಇತಿಹಾಸ ಸಾಕ್ಷಿಯಾಗುತ್ತಿರಲಿಲ್ಲವೇನೋ...
ಕನ್ನಡ ನಾಡಿನ ಕೆಚ್ಚೆದೆಯ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಪತಿಯ ಮರಣಾನಂತರ ವಾರಸು ಕಾಯಿದೆಯಡಿ ಕುಟಿಲ ಖ್ಯಾತಿಯ ಆಂಗ್ಲರು ರಾಜ್ಯ ಕಬಳಿಸಲು ಹೊಂಚಿಸಿದ ಆ ಕ್ಷಣದಲ್ಲಿ ಅವರ ಬೆದರಿಕೆಗಳಿಗೆ ಜಗ್ಗದೆ ಯುದ್ಧಕ್ಕೆ ಅಣಿಯಾಗದೆ sss......... ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ನಾಡು ಸಾಕ್ಷಿಯಾಗುತ್ತಿರಲಿಲ್ಲವೇನೋ (ಆದರೆ ವಿಪರ್ಯಾಸ ನೋಡಿ ಕಿತ್ತೂರು ಯುಧ್ಧವಾಗಿ(೧೮೨೪) ಎಷ್ಟೋ ವರ್ಷಗಳ ನಂತರ ಕ್ರಿ.ಶ.೧೮೫೭ರಲ್ಲಿ ನಡೆದ ಸಿಪಾಯಿ ದಂಗೆಯನ್ನು ನಾವೆಲ್ಲಾ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಮಾನ್ಯ ಮಾಡಿದ್ದೇವೆ.)
ಅಮೇರಿಕೆಯ ಚಿಕ್ಯಾಗೋದಲ್ಲಿ ನಡೆದ ಜಾಗತಿಕ ಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸ್ವಾಮಿ ವಿವೇಕಾನಂದ ನೆರೆದ ಜನರನ್ನು ಸಂಬೋಧಿಸಲು "ಅಕ್ಕ ತಂಗಿಯರೆ ಅಣ್ಣ ತಮ್ಮಂದಿರೆ" ಎಂಬುದಾಗಿ ಬಳಸದೆ sss ಅವರ ಮಹತ್ವ ವಿದೇಶೀಯರಿಗೆ ಗೊತ್ತಾಗುತ್ತಿರಲಿಲ್ಲವೇನೋ....
ಭಾರತದ ಅಣುಶಕ್ತಿ ಸಾಮರ್ಥ್ಯವನ್ನು ಜಗತ್ತಿಗೆ ತಿಳಿಯಪಡಿಸಿದ ಪೋಖ್ರಾನ್ ಅಣು ಪರೀಕ್ಷೆಯ ಬಗ್ಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಚಲವಾದ ನಿರ್ಧಾರವನ್ನು ಆ ಕ್ಷಣದಲ್ಲಿ ತೆಗೆದುಕೊಳ್ಳದೇ sss ಜಗತ್ತಿನ ದೊಡ್ಡಣ್ಣ ಅಮೇರಿಕಾಗೆ ನಮ್ಮ ಶಕ್ತಿ ಸಾಮರ್ಥ್ಯ ತಿಳಿಯುತ್ತಿರಲಿಲ್ಲವೇನೋ.....
ಆಯಾಯಾ ಕ್ಷಣದ ನಿರ್ಧಾರಗಳು ಯಾರನ್ನೇ ಆದರೂ ಎಂಥಾ ಇಕ್ಕಟ್ಟಿಗೆ, ಪೇಚಿಗೆ, ಆಪತ್ತಿಗೆ, ಸಂಭ್ರಮಕ್ಕೆ, ದುಃಖಕ್ಕೆ, ಸಂತಸಕ್ಕೆ ಸಿಕ್ಕಿಸುತ್ತವೆ ಹೇಳಲು ಬಾರದು.
ರಾತ್ರಿ ಊಟವಾದ ಮೇಲೆ ಏಕಾಂತದಲ್ಲಿ ಹೆಂಡತಿ ಗಂಡನ ಮನಸೆಳೆದು ತನ್ನ ರೇಶ್ಮೆ ಸೀರೆ, ಬಂಗಾರದ ಒಡವೆ, ವಜ್ರದ ಓಲೆ ಇತ್ಯಾದಿಗಳಿಗೆ ಬೇಡಿಕೆ ಸಲ್ಲಿಸಿದಾಗ ಆ ಕ್ಷಣದಲ್ಲಿ ಗಂಡ ಎನ್ನುವ ಪ್ರಾಣಿ ಎಚ್ಚೆತ್ತುಕೊಂಡರೆ ಸರಿ ಇಲ್ಲವಾದರೆ ಬೇಡಿಕೆ ಪೂರೈಸಲು ಹರಸಾಹಸ ಮಾಡುವದನ್ನು ನಾವೆಲ್ಲ ಅನುಭವಿಸಿದ್ದೇವೆ ಅಥವಾ ಅನುಭವಿಕರಿಂದ ತಿಳಿದುಕೊಂಡಿದ್ದೇವೆ.
ಪ್ರಿಯಕರನ ಮನೋಸ್ಥಿತಿ ಅರಿಯದೆ ಹಿಂದಿನಿಂದ ಬಂದು ತನ್ನ ಕೈಯಿಂದ ಅವನ ಕಣ್ಣು ಮುಚ್ಚಿ "ಪೆಹಚಾನ್ ಕೌನ್" ಎಂದ ಪ್ರಿಯತಮೆಗೆ ಅತ್ಮೀಯ ಇಲ್ಲವೆ ಸಿಡಿಮಿಡಿ ಮಾತುಗಳು ಸಿಗಬಹುದು. ಅದು ಆ ಕ್ಷಣ ಪ್ರಿಯಕರ ಪ್ರತಿಕ್ರಿಯಿಸುವ ರೀತಿಯ ಮೇಲೆ ನಿರ್ಧಾರಿತವಾಗುತ್ತದೆ.


ಹೊಟ್ಟೆ ಹಸಿದು ತಟ್ಟೆಯಲ್ಲಿರುವದನ್ನು ಗಬಗಬನೆ ತಿನ್ನುವಾಗ ತುತ್ತಿನಲ್ಲಿ ಬರುವ ಕಲ್ಲು, ಬೇಡವಾದ ಅತಿಥಿಯಂತೆ ಬರುವ ಕ್ರೆಡಿಟ್ ಕಾರ್ಡಿನವರ, ಬ್ಯಾಂಕಿನವರ ಮೊಬೈಲ್ ಕಾಲ್ಲು, ಇಂಪಾರ್ಟಂಟ್ ನ್ಯೂಸ್ ನೋಡುತ್ತಿರುವಾಗ ಮನೆಯ ಸದಸ್ಯರೊಬ್ಬರು ಬದಲಾಯಿಸುವ ಟಿವಿ ಚಾನೆಲ್ಲು, ಸೇಲ್ಸಮನ್ನುಗಳು ಬಾರಿಸುವ ಮನೆಯ ಕಾಲ್ ಬೆಲ್ಲು, ಬಾಗಿಲು ತೆಗೆದ ಹೆಂಡತಿಯ ಮುಖದ ಮೇಲಿನ ಡಲ್ಲು, ಕೋರಿಯರ್ ಇಲ್ಲವೆ ಪೋಸ್ಟಿನಲ್ಲಿ ಬರುವ ಕ್ರೆಡಿಟ್ ಕಾರ್ಡ್ ಬಿಲ್ಲು, ಅತಿ ಮುಖ್ಯ ಸಂದರ್ಭದ ಫೋಟೋ ತೆಗೆಯುತ್ತಿರುವಾಗ ಕೈಕೊಡುವ ಕ್ಯಾಮೆರಾ ಬ್ಯಾಟರಿ ಸೆಲ್ಲು, ಆ ಕ್ಷಣದಲ್ಲಿ ಎಷ್ಟೊಂದು ಪಿತ್ತ ನೆತ್ತಿಗೇರಿಸುತ್ತವೆ ಅಲ್ಲವೆ?
ಅವೆಲ್ಲ ಆ ಕ್ಷಣ ನಮ್ಮ ಮನಸ್ಸು ಪ್ರತಿಕ್ರಿಯಿಸುವ ರೀತಿಗೆ ಅನ್ವಯವಾಗಿರುತ್ತವೆ. "ಪ್ರೀತಿಗೆ ಕಣ್ಣಿಲ್ಲ" ಹಾಗೆ ಆಗುವದು ನಮ್ಮ ಮನದಾಳದಲ್ಲಿ ಉದ್ಭವಿಸುವ ವಿಚಾರಗಳಿಂದ ನಾವು ತೆಗೆದುಕೊಳ್ಳುವ ಆ ಕ್ಷಣದ ನಿರ್ಧಾರಗಳಿಂದ ಅಲ್ಲವೆ? ಒಂದು ಕ್ಷಣ ಯೋಚಿಸಿ ನೋಡಿ.


ಜೀವನವೆಂದ ಮೇಲೆ ಕಷ್ಟ ಕಾರ್ಪಣ್ಯಗಳು, ತೊಂದರೆಗಳು, ಸೋಲುಗಳು, ರೋಗ ರುಜಿನಗಳು ಬರುವದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ, ಆ ಕ್ಷಣಗಳಲ್ಲಿ ನಾವು ನಮ್ಮ ಬುದ್ಧಿಗೆ ದೆವ್ವ ಬಡಿದವರಂತೆ ಜೀವನದ ಮುಂದಿನ ಕ್ಷಣ ನಮ್ಮ ಪಾಲಿಗೆ ಇಲ್ಲ ಎಂದು ನಿರ್ಣಯಿಸಿ ಸೇಡಿನ ಕ್ರಮಗಳನ್ನು, ದೇಹದಂಡನೆ ಅಥವಾ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಂಡರೆಽಽಽ ಜೀವನಕ್ಕೆ ಅರ್ಥವೆಂಬುದಿದೆಯೆ?
ಅತಿ ಸಂತಸವಾದಾಗ, ಅತಿ ದುಃಖವಾದಾಗ ಆ ಕ್ಷಣದಲ್ಲಿ ಅತಿ ಹೆಚ್ಚಿನ ರಕ್ತ ಪೊರೈಕೆ ನಮ್ಮ ಮೆದುಳಿಗೆ ಆಗುವದರಿಂದ ಬ್ಯಾಲನ್ಸ್ ಕಳೆದುಕೊಳ್ಳುವ ನಮ್ಮ ಮನಸ್ಸು ನಮ್ಮ ಕೈಯಿಂದ ಏನೆಲ್ಲಾ ಮಾಡಿಸುತ್ತದೆ ಒಂದು ಕ್ಷಣ ಯೋಚಿಸಿ ನೋಡಿ....
ಭಾರತ ಪಂದ್ಯ ಗೆದ್ದ ಖುಷಿಯಲ್ಲಿ ನಾಯಕ ಸೌರವ್ ಗಂಗೂಲಿ ಹಾಕಿಕೊಂಡ ಶರ್ಟು ಕಳಚಿ ಮೈದಾನದ ತುಂಬ ನೆರೆದ ಜನರ ಅರಿವೇ ಇಲ್ಲದೆ ಕೈಯಿಂದ ಅದನ್ನು ಸುತ್ತಿಸುತ್ತಾನೆ, ವಿಶ್ವ ಸುಂದರಿ ಐಶ್ವರ್ಯಾ ರೈ ತನಗೆ ಒಲಿಯುತ್ತಿಲ್ಲ ಎಂದು ಕಂಠ ಪೂರ್ತಿ ಕುಡಿದ ಸಲ್ಮಾನ್ ಖಾನ್ ಅಲಿಯಾಸ್ ಸಲ್ಲೂ ಸರಿರಾತ್ರಿಯಲ್ಲಿ ಅವಳ ಮನೆಯೆದುರು ರಂಪಾಟ ಮಾಡುತ್ತಾನೆ,

ಶತಾಯ ಗತಾಯ ಚುನಾವಣೆ ಗೆಲ್ಲ ಬಯಸಿದ್ದ ಆಮ್ಚಿ ಮುಂಬೈ ಖ್ಯಾತಿಯ ಬಾಳ್ ಠಾಕ್ರೆ ಉತ್ತರ ಭಾರತೀಯರನ್ನು ಒಲಿಸಿಕೊಳ್ಳಲು ಬಹಿರಂಗ ಸಭೆಯೊಂದರಲ್ಲಿ ಸೇರಿದ ಜನಕ್ಕೆ ದೀರ್ಘದಂಡ ನಮಸ್ಕಾರ ಮಾಡುತ್ತಾನೆ, ವಾದವಿವಾದಗಳಲ್ಲಿ ತೊಡಗಿದ ತಮಿಳುನಾಡಿನ ವಿಧಾನಸಭೆಯಲ್ಲಿ ಬುದ್ಧಿಗೆ ಮಂಕು ಕವಿದ ಸದಸ್ಯನೊಬ್ಬ ಜಯಲಲಿತಾಳ ಸೀರೆ ಸೆಳೆಯಲು ಮುಂದಾಗಿ ಆಧುನಿಕ ದುಶ್ಯಾಸನ ಆಗಬಯಸುತ್ತಾನೆ......
"ಬ್ಯುಟಿ ಲೈಸ್ ಇನ್ ಬಿಹೋಲ್ಡರ್ಸ್ ಐಸ್" ಅನ್ನುವಂತೆ "ಸೌಂದರ್ಯ ನೋಡುಗನ ಕಣ್ಣಲ್ಲಿರುತ್ತದೆ" ಅದೇ ರೀತಿ ಆಯಾಯಾ ಸಂದರ್ಭಗಳಿಗನುಸಾರವಾಗಿ ಆಯಾಯಾ ಕ್ಷಣಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವದು ಆಯಾಯಾ ವ್ಯಕ್ತಿಗಳ ಮನಸ್ಸಿನಲ್ಲಿ ಅಡಗಿರುತ್ತದೆ ಮತ್ತು ಮನೋಸ್ಥಿತಿಯನ್ನು ಅವಲಂಬಿಸಿರುತ್ತದೆ. ಮುಂದೆ ಉಂಟಾಗುವ ಪರಿಣಾಮಗಳ ಬಗ್ಗೆ ಸ್ವಲ್ಪ ಯೋಚಿಸಿ ನಾವು ನಿರ್ಧಾರಗಳನ್ನು ಕೈಗೊಂಡರೆ ಬಾಳು ಬಂಗಾರವಾಗುತ್ತದೆ ಇಲ್ಲದೆ ಹೋದರೆ ನರಕವಾಗುತ್ತದೆ.
ಈ ಲೇಖನ ಓದಿದ ಮೇಲೆ ನಮ್ಮನ್ನೆಲ್ಲ ಒಟ್ಟಾಗಿಡಲು, ಸದಾ ಸಂಪರ್ಕದಲ್ಲಿರಿಸಲು ಹೆಣಗುವ ನಮ್ಮ ಟಿಪಿ ಬಳಗ ಯಾಹೂ ಗ್ರೂಪ್ ಹಾಗೂ ನಿರಂತರ ವಿಶೇಷಾಂಕಗಳು ಶ್ರಮಪಡುತ್ತಿರುವದು ಸೂಕ್ತ ಎಂದು ಒಂದು ಕ್ಷಣ ನಿಮಗೆ ಅನ್ನಿಸಿದರೆ ನನ್ನ ಶ್ರಮ ಸಾರ್ಥಕ ಅನ್ನಿಸುತ್ತದೆ.

1 comment:

Tv for Blogs said...

Very good this blog but the Tv for Blogs add movement....and friends.Kisses my friend.