Wednesday, November 01, 2006

ಮರೆಯಾಗುತ್ತಿರುವ ವಡಪು ಹೇಳುವ ಕಲೆ


ಶ್ರೀಮತಿ ಶಾಂತಾ ಚಂದ್ರಶೇಖರ ರಾಜಗೋಳಿ, ಧಾರವಾಡ

ನಮ್ಮ ಬಳಗದ ರಾಜ್‌ಪ್ರಕಾಶ್ ಅಲಿಯಾಸ್ ಪ್ರಕಾಶ ರಾಜಗೋಳಿ ಅವರ ತಾಯಿಯಾದ ಶಾಂತಾ ಅವರು ಟಿಪಿಬಳಗ ಬ್ಲಾಗ್‍ಗಾಗಿ ಉತ್ತರಕರ್ನಾಟಕದ ಗ್ರಾಮೀಣ ಸೊಗಡಿನ ಪರಿಚಯವನ್ನು ಜಾನಪದ ಗೀತೆಗಳ ಮೂಲಕ ಮಾಡಿ ಕೊಟ್ಟಿದ್ದಾರೆ. ಮೊಮ್ಮಕ್ಕಳಾದ ದರ್ಶನ್ ಹಾಗೂ ಅಂಕಿತಾ ಅವರ ಆಗಮನದ ಸಡಗರದಲ್ಲಿರುವ ಇವರು ಇನ್ನೂ ಅನೇಕ ಜಾನಪದ ಗೀತೆಗಳನ್ನು ಕೊಡಲಿಚ್ಚಿಸಿದ್ದರು. ಆದರೆ ನಾವೇ ಮುಂದಿನ ದಿನಗಳಿಗೆ ಅಂತಾ ಸ್ವಲ್ಪಾ ಮೀಸಲಿಟ್ಟಿದ್ದೇವೆ. ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ದಾಳಿಗೆ ತತ್ತರಿಸಿ ತಾಲೂಕು ಸ್ಥಾನವನ್ನು ಬೈಲಹೊಂಗಲಕ್ಕೆ ಬಿಟ್ಟುಕೊಟ್ಟ ಸಂಪಗಾವಿ ಊರಿನವರಾದ ಇವರು ಯರಡಾಲದ ಸೋದರಮಾವ ಶ್ರೀಯುತ ಚಂದ್ರಶೇಖರ ರಾಜಗೋಳಿಯವರನ್ನು ವರಿಸಿ ೪೦+ ವರ್ಷಗಳ ತುಂಬು ಸಂಸಾರ ಜೀವನ ನಡೆಸುತ್ತಿದ್ದಾರೆ.



ಉತ್ತರ ಕರ್ನಾಟಕದ ಕಡೆ ಶುಭ ಸಮಾರಂಭಗಳಲ್ಲಿ ಆರತಿ ಮಾಡುವ ಸಂದರ್ಭಗಳಲ್ಲಿ ಮುತ್ತೈದೆಯರು ತಮ್ಮ ಗಂಡನ ಹೆಸರು ಹೇಳುವಾಗ ಬಳಸುವ ಚುಟುಕುಗಳಿಗೆ ವಡಪುಗಳು ಎಂದು ಕರೆಯುತ್ತಾರೆ. ಈಗಿನವರಿಗೆ ಈ ರೀತಿ ವಡಪುಗಳನ್ನು ಹೇಳಲೂ ಬರುವದಿಲ್ಲ ಮತ್ತು ಅಷ್ಟೊಂದು ಸಮಯವೂ ಇರುವುದಿಲ್ಲ. ಆದರೆ ನಮ್ಮ ಕಾಲದಲ್ಲಿ ತುಂಬಾ ಬಳಕೆಯಲ್ಲಿದ್ದ ಮತ್ತು ಸಧ್ಯಕ್ಕೆ ನಶಿಸುತ್ತಿದೆ ಎನ್ನಬಹುದಾದ ವಡಪುಗಳ ಬಗ್ಗೆ ಒಂದು ಅವಲೋಕನ ಮಾಡುವ ಪ್ರಯತ್ನ ಮಾಡಿದ್ದೇನೆ.

ಗಂಡನ ಯೋಗಕ್ಷೇಮವೇ ಹೆಂಡತಿಯ ಆದ್ಯ ಕರ್ತವ್ಯ ಆಗಿರುವದರಿಂದ ವಡಪುಗಳಲ್ಲಿ ಈ ರೀತಿ ಹೇಳಬಹುದು.

"ಅರಗಿಳಿಗೆ ಸೇರುವದು ಆಲದ ಹಣ್ಣು
...........ಅವರ ಕೈಯಲ್ಲಿ ಕೊಡುವೆನು ಬಾಳೆಹಣ್ಣು"

( ಸೂಚನೆ : ............ ಇದ್ದಲ್ಲಿ ಗಂಡನ ಹೆಸರನ್ನು ಸೇರಿಸಿಕೊಳ್ಳುವದು)

"ಆಕಾಶದಲ್ಲಿ ಇರುವದು ಹಾಲಕ್ಕಿ
ಅಂಗಡಿಯಲ್ಲಿ ಇರುವದು ಏಲಕ್ಕಿ
...........ಅವರ ಕೈಯಲ್ಲಿ ಕೊಡುವೆನು ಚಹಾ ಅವಲಕ್ಕಿ"
"ಶಕುಂತಲೆ ಅತ್ತೆಯ ಮನೆಗೆ ಹೋಗುವಾಗ
ಸಖಿಯರಿಗೆ ಆಗುವದು ಚಡಪಡಿಕೆ
........ಅವರ ಕೈಯಲ್ಲಿ ಕೊಡುವೆನು ಎಲೆಅಡಿಕೆ"


ಆಂಗ್ಲರು ನಮ್ಮನ್ನು ಆಳುತ್ತಿದ್ದಾಗ ಮತ್ತು ಇಂಗ್ಲೀಷ್ ಪ್ರಾಮುಖ್ಯತೆ ಪಡೆದಿದ್ದಾಗ ಅದನ್ನೇ ಮುತ್ತೈದೆ ತನ್ನ ವಡಪಿನಲ್ಲಿ ಅಳವಡಿಸಿಕೊಂಡಿರುವ ಬಗೆ ಹೇಗಿದೆ ನೋಡಿ . . . !

"ಅತ್ತಿಯವರಿಗೆ ಬೇಕು ಅತ್ತಿ ಹೂವಿನ ಮಡಿ
ಮಾವನವರಿಗೆ ಬೇಕು ಮಲ್ಲಿಗೆ ಹೂವಿನ ಮಡಿ
ನನಗೆ ಬೇಕು ಕ್ಯಾದಿಗೆ ಮಡಿ
..........ಅವರಿಗೆ ಬೇಕು ಇಂಗ್ಲೀಷ್ ನುಡಿ"


ತನ್ನ ಗಂಡನ ಕೆಲಸದ ಬಗ್ಗೆ ಮುತ್ತೈದೆ ಮೆಚ್ಚುಕೆ ವ್ಯಕ್ತಪಡಿಸಿದ್ದು ಹೀಗೆ.

"ಮಲ್ಲಿಗೆ ಹೂವಿನ ಮಂದಾರ
ಶ್ರೀಗಂಧದ ಬಾಜೀದಾರ
ಕಂಪನಿ ಕಾರಬಾರದಾಗ ಇಂಗ್ಲೀಷ್ ದರಬಾರ್ ನಡಸ್ತಾರ್......"
"ಗೋಟು ಪಾಟ್ಲಿ ಹಿಂದ
ರಾಜ ವರ್ಕಿ ಮುಂದ
.......ರು ಬರುವ ತನಕ ಕಛೇರಿಯಲ್ಲ ಬಂದ್"



ತನ್ನ ಗಂಡ ತನ್ನ ಸುತ್ತ ಸುತ್ತುತ್ತಾನೆ ಮತ್ತು ತನ್ನ ಹೂವಿನ ಮೇಲಿನ ಪ್ರೀತಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಅಂತ ಕಾವ್ಯಮಯವಾಗಿ ವಡಪುಗಳಲ್ಲಿ ಗರತಿ ಹೇಳುವದು ಹೀಗೆ.

"ಅತ್ತಿ ಹೆಸರು ಅತ್ತಿಗೆ ಹೂವು
ಮಾವನ ಹೆಸರು ಮಲ್ಲಿಗೆ ಹೂವ
ನನ್ನ ಹೆಸರು ಸುಗಂಧಿ ಹೂವ
ಸುಗಂಧಿ ಹೂವಿನ ಮುಂದ ಸುಳಿದಾಡತಾರ......."
"ತಾಜ ಮಲ್ಲಿಗಿ ಜೂಜ ಮಲ್ಲಿಗಿ ಮಧ್ಯಾಹ್ನ ಮಲ್ಲಿಗಿ
ತುಗೊಂಡ ಇದ್ದಲ್ಲಿಗೆ ಬರತಾರ ............."


ಸ್ವಲ್ಪ ಆಧುನಿಕತೆಯನ್ನು ಒಳಗೊಂಡು ತಯಾರಾದ ಒಂದು ವಡಪು.
"ಆಗ್ರಾದಲ್ಲಿರುವದು ತಾಜಮಹಲ್
........ರ ತೇಜವಿರುವದು ನನ್ನ ಕುಂಕುಮದ ಮೇಲ್"


ದೇಶದ ಆಗುಹೋಗುಗಳನ್ನು ಗರತಿ ಗಂಡನ ಹೆಸರು ಹೇಳುವಾಗ ಬಳಸಿಕೊಳ್ಳುವದು ಹೇಗಿದೆ ನೋಡಿ....
"ಆಂಗ್ಲರಿರುವದು ಇಂಗ್ಲಂಡಿನಲ್ಲಿ
ಕಾಂಗ್ರೆಸ್ಸಿನವರಿರುವದು ಭಾರತದಲ್ಲಿ
..........ರು ಕಟ್ಟಿದ ಮಂಗಳಸೂತ್ರವಿರುವದು ನನ್ನ ಕೊರಳಲ್ಲಿ"

(ಕಾಂಗ್ರೆಸ್ಸಿನವರಿರುವದು ಎನ್ನುವ ಜಾಗದಲ್ಲಿ ಬೇರೆ ಪಕ್ಷಗಳ ಹೆಸರು ಸಹ ಬಳಸಿಕೊಳ್ಳಬಹುದು)


ಪತಿಯೇ ಪರದೈವ ಪತಿಯ ಪಾದಸೇವೆಯೆ ಪರಮ ಭಾಗ್ಯ ಎಂದು ನಂಬಿದ ಗೃಹಿಣಿ ಗಂಡನ ಹೆಸರನ್ನು ಹೀಗೆ ಹೇಳುತ್ತಾಳೆ.

"ನೀರಲ್ಲಿ ಕಾಣುವದು ನೆರಳು
ನಾರಿ ಹಾಕುವಳು ಹೆರಳು
........ರ ಪಾದವೆ ನನಗೆ ವಜ್ರದ ಹರಳು"


ವಡಪು ಹೇಳುವಾಗ ನೆರೆದ ಎಲ್ಲರಿಗೂ ತನ್ನ ಹೆಸರೂ ಗೊತ್ತಾಗಲಿ ಎಂಬ ಉದ್ದೇಶದಿಂದ ಪೌರಾಣಿಕ ಸನ್ನಿವೇಶವೊಂದನ್ನು ಬಳಸಿಕೊಂಡು ವಡಪು ನಿರ್ಮಾಣ ಮಾಡಿದ ರೀತಿ ಹೇಗಿದೆ ನೋಡಿ.

"ವಿಶ್ವಾಮಿತ್ರನ ತಪಸ್ಸನ್ನು ಭಂಗ ಮಾಡಿದವಳು ಮೇನಕೆ ಎಂಬ ವಾರಾಂಗಿನಿ
.........ರ ಹೆಸರು ಹೇಳುವೆನು.......ಎಂಬ ಅರ್ಧಾಂಗಿನಿ"


ತನ್ನ ಗಂಡ ತನ್ನನ್ನು ಬಹಳ ಪ್ರೀತಿಸುತ್ತಾನೆ ಎಂದು ವಡಪಿನಲ್ಲಿ ಹೇಳುವಾಗ ಸತಿಗೆ ಮಹದಾನಂದ.

"ಹಾವಿಗೆ ಹುತ್ತ ಚೆಂದ
ಕೊರಳಿಗೆ ಮುತ್ತ ಚೆಂದ
..........ರಿಗೆ ನಾನೇ ಚೆಂದ"

ತನ್ನ ಮೆಚ್ಚಿನ ಗಂಡನ ಹಡೆದವಳ(ತಾಯಿ) ಬಗ್ಗೆ ಪ್ರೀತಿ ವ್ಯಕ್ತ ಮಾಡುವಾಗ ಹುಟ್ಟಿದ ಒಂದು ವಡಪು.

"ರತ್ನದ ವೃಂದಾವನ ಮುತ್ತಿನ ತುಳಸಿಕಟ್ಟೆ
ಅತ್ತಿಯವರ ಹೊಟ್ಟಿಲಿ ಮುತ್ತಿನಂತವ್ರು ಹುಟ್ಟ್ಯಾರ....."


ನಮ್ಮಲ್ಲಿ ಸೋಬಾನೆ, ಬಳೆ ಇಡಿಸುವದು, ಉಡಿ ತುಂಬುವದು, ಸೀರೆ ಮಾಡುವದು, ನಾಮಕರಣ ಮುಂತಾದ ಕೆಲಸಗಳು ನಡೆಯುವದು ಹೆಚ್ಚಾಗಿ ಸಾಯಂಕಾಲದಲ್ಲಿ ಅದನ್ನೇ ತನ್ನ ವಡಪಿನಲ್ಲಿ ಗರತಿ ಬಳಸಿಕೊಂಡಿದ್ದು ಹೀಗೆ.

"ಕಿತ್ತೂರು ಚೆನ್ನಮ್ಮನ ಮೂಗಿನಲ್ಲಿ ಇರುವದು ವಜ್ರದ ಹರಳಿನ ನತ್ತು
.........ರ ಹೆಸರು ಹೇಳುವೆನು ಮೂರುಸಂಜಿ ಹೊತ್ತು"


(ಮೂರುಸಂಜಿ- ಇದು ಮುಸ್ಸಂಜೆಯ ಗ್ರಾಮೀಣ ರೂಪ)

ಹೆಣ್ಣು ಮಕ್ಕಳಿಗೆ ತವರೆಂದರೆ ಪಂಚ ಪ್ರಾಣ ಹೀಗಾಗಿ ತನ್ನ ತವರಿನ ಬಗ್ಗೆ ಮತ್ತು ತನ್ನ ತವರಿನವರ ಬಗ್ಗೆ ಆಕೆ ವಡಪು ಹೇಗೆ ತಯಾರಿಸುತ್ತಾಳೆ ನೋಡಿ.

"ಗಾಂಧೀಯವರು ಉಡುವದು ಮೂರು ಮಳದ ಪಂಜಿ
.............ರ ಹೆಸರು ಹೇಳುವೆನು.........ಅವರ ತಂಗಿ"
"ಈಶ್ವರನಿಗೆ ಏರಿಸುವರು ಮೂರುದಳದ ಪತ್ರಿ
...........ರ ಹೆಸರು ಹೇಳುವೆನು.......... ಅವರ ಪುತ್ರಿ"


೧೨ನೆಯ ಶತಮಾನದಲ್ಲಿ ಬಸವಾದಿ ಶರಣರು ಮಾಡಿದ ವಚನ ಕ್ರಾಂತಿ ಅನೇಕ ಗೃಹಿಣಿಯರಿಗೆ ವಚನ ಬರೆಯಲು ಪ್ರೇರೆಪಿಸಿತಲ್ಲದೆ ಅವರ ಜೀವನದ ಅನುಭವಾಮೃತಗಳು ನಮ್ಮ ನಾಡಿಗೆ ಅಪೂರ್ವ ಕೊಡುಗೆ ನೀಡಿವೆ. ಹೀಗಿರುವ ಶಿವಶರಣರ ಬಗ್ಗೆ ಅವರ ಬೋಧನೆಗಳ ಬಗ್ಗೆ ತನಗಿರುವ ಅರಿವನ್ನು ಗರತಿ ವಡಪಿನಲ್ಲಿ ಹೇಗೆ ಬಳಸಿಕೊಂಡಿದ್ದಾಳೆ ನೋಡಿ.. !

"ಅಂಗಕ್ಕೆ ಲಿಂಗವು ಶ್ರೇಷ್ಠ
ಲಿಂಗಕ್ಕೆ ಜಂಗಮ ಶ್ರೇಷ್ಠ
ಜಂಗಮಕ್ಕೆ ವಿಭೂತಿ ಶ್ರೇಷ್ಠ
ವಿಭೂತಿಗೆ ರುದ್ರಾಕ್ಷಿ ಶ್ರೇಷ್ಠ
ನನಗೆ ನಮ್ಮ.......ರೆ ಶ್ರೇಷ್ಠ"


ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ವಿನಯ ವಿಧೇಯತೆಗಳನ್ನು ಮುತ್ತೈದೆ ತನ್ನ ವಡಪಿನಲ್ಲಿ ಅಳವಡಿಸಿಕೊಳ್ಳುವಾಗ ನಳದಮಯಂತಿಯರ ಪೌರಾಣಿಕ ಕಥೆಯ ಸಹಾಯ ಪಡೆಯುತ್ತಾಳೆ.

"ನಂದನವನದಲ್ಲಿ ಹಂಸ ಪಕ್ಷಿಯ ಕೂಡ ಮಾತಾಡಿದವಳು ದಮಯಂತಿ
.......ರ ಹೆಸರು ಹೇಳುವೆನು ನಿಮಗೆ ಮಾಡಿಕೊಳ್ಳುತ್ತ ವಿನಂತಿ"


ಗಂಡನ ಮನೆ ಬೆಳಗಲು ಬಂದ ಸೊಸೆ ತನ್ನ ಗಂಡನ ಮನೆಯ ಹೆಸರನ್ನು ಶಾಶ್ವತವಾಗಿಡಲು ವಡಪಿನ ಮೊರೆ ಹೋಗಿದ್ದಾಳೆ.
"ರುಕ್ಮಿಣಿಯು ಶೀಕೃಷ್ಣನಿಗೆ ಓಲೆ ಬರೆಯಲು ಮುತ್ತು ಸುಟ್ಟು ಮಾಡಿದಳು ಮಸಿ
................ರ ಹೆಸರು ಹೇಳುವೆನು ............... ಅವರ ಸೊಸಿ"


ಹೆಂಗಳೆಯರೇ ತುಂಬಿರುವ ಸಮಾರಂಭಗಳಲ್ಲಿ ತಿಳಿ ಹಾಸ್ಯಗಳಿಗೆ ಎನು ಕೊರತೆಯಿಲ್ಲ. ಗಂಡನ ಮನೆಯವರನ್ನು ಚುಡಾಯಿಸಲು ವಡಪಿನ ಸಹಾಯ ಹೇಗೆ ಪಡೆಯಬಹುದು ನೋಡಿ.

"ಆರ ಹೇರ ಎಳ್ಳ
ಮೂರ ಹೇರ ಜೊಳ್ಳ
.............ಅವರ ಮಾತೆಲ್ಲ ಬರೀ ಸುಳ್ಳ"

(ಹೇರ ಎಂದರೆ ಹಳ್ಳಿಗಳಲ್ಲಿ ಧಾನ್ಯಗಳನ್ನು ಅಳೆಯಲು ಬಳಸುವ ಮಾಪಕ)

"ಹಳ್ಳದ ಅಚೀಕ ಅವರು
ಹಳ್ಳದ ಇಚೀಕ ನಾವು
ಹಳ್ಳದಾಗ ಇಳೀಲಿಲ್ಲ ಮಾರಿ ತೊಳೀಲಿಲ್ಲ
...............ಅವರ ನೆಲಿ ನನಗ ತಿಳೀಲಿಲ್ಲ"


(ನೆಲಿ ಎನ್ನುವದು ನೆಲೆ ಎಂಬುದರ ಗ್ರಾಮ್ಯ ರೂಪ)

ಕೆಲವೊಬ್ಬರ ಮನೆಗಳಲ್ಲಿ ಕೆಲವೊಂದು ಶುಭಕಾರ್ಯಗಳನ್ನು ಮಾಡುವ ಪದ್ಧತಿ ಇರುವದಿಲ್ಲ ಹೀಗಾಗಿ ಅವರು ತಮ್ಮ ಸಂಬಂಧಿಕರ ನೆರವು ಪಡೆಯಬೇಕಾಗುತ್ತದೆ ಆಗ ಅವರ ಸಹಾಯವನ್ನು ಸ್ಮರಿಸಲೋಸುಗ ಜಾಣ ಗರತಿ ವಡಪಿನಲ್ಲೆ ಅವರ ಉಪಕಾರ ಸ್ಮರಣೆ ಮಾಡುತ್ತಾಳೆ.

"ಅಕ್ಕಮಹಾದೇವಿ ಐಕ್ಯ ಆದದ್ದು ಕದಳಿ ಬನದಲ್ಲಿ
......ರ ಹೆಸರು ಹೇಳುವೆನು.............ಅವರ ಮನೆಯಲ್ಲಿ"


ತನ್ನ ಗಂಡನ ಮನೆಯವರ ಬಗ್ಗೆ ತನ್ನ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಮಾಡಲು ವಡಪಿಗಿಂತ ಬೇರೆ ಸಾಧನ ಇನ್ನೊಂದಿಲ್ಲ ಎಂದರಿತಾಗ ಹುಟ್ಟಿದ ವಡಪು ಇದು.

"ಶಿವಶರಣೆ ನಮ್ಮತ್ತಿ
ಶಿವಶರಣ ನಮ್ಮಾವ
ಲಸಗುನ್ನಿ ಕಾಯಿಯಂತ ನಮ್ಮ ನಾದಿನಿ
ಲಸ್ಕರದಂತ ನಮ್ಮ ಮೈದುನ
ಚಂದ್ರಹಾರದಂತ ನಮ್ಮ ರಾಯರು........."


(ಲಸಗುನ್ನಿ ಕಾಯಿ=ವಿಪರೀತ ಕೆರೆತ ಉಂಟುಮಾಡುವ ಗುಣ ಹೊಂದಿರುವ ಒಂದು ಬಗೆಯ ಗಿಡದ ಕಾಯಿ)
(ಲಸ್ಕರ=ಒಳ್ಳೆಯವ)

ತನ್ನ ಗಂಡನ ಸದ್ಗುಣಗಳ ಬಗ್ಗೆ ವಡಪಿನಲ್ಲೆ ಗರತಿ ಹ್ಯಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ ನೋಡಿ.

"ಸೆರಗಿನ ಸಿಂಬಿ ಅರಗಿನ ಕೊಡ
ಶೀಲವಂತರ ಮನಿ ಸೀತಾದೇವಿ ಬರತಾಳಂತ
ಮಾರಿ ನೋಡಿ ದಾರಿ ಬಿಡತಾರ ನಮ್ಮ ರಾಯರು..............."


ಹೀಗೆ ಹಲವಾರು ವಿಧದಿಂದ ಗಂಡನ ಹೆಸರನ್ನು ಹೇಳುವ ವಡಪು ಹೇಳುವ ಕಲೆಯನ್ನು ಅಳಿಯದಂತೆ ಉಳಿಸಬೇಕಲ್ಲವೆ?
ಎಲ್ಲರಿಗೂ ಒಳ್ಳೆಯದಾಗಲಿ.

3 comments:

Unknown said...

This has come very nice.

Long time back I heard senior citizens talking about songs which are sung in the family social gatherings or celberations.
Nobody knew what are the songs that was realy unfortunate.

I know most of us do not have time and skills to create new one, importantly we should never fail in preserving these jewels.

Please keep posting....

Unknown said...

ಕಂಚಿನಲ್ಲಿರುವದು ಕಾಮಾಕ್ಷಿ ಮಿಂಚಿನಲಿರುವದು ಮಿನಾಕ್ಷಿ ರಾಯರ ಹೆಸರು ಹೇಳತಿನಿ ನಿಮ್ಮೆಲ್ಲರ ಸಾಕ್ಷಿ....

Yamanur Saheb D said...

ಆ ಕಡಿಗೆ ಹಳ್ಳ ಈ ಕಡಿಗೆ ಹೊಳಿ. ನಡುವೆ ಹೂವಿನ ತ್ವಾಟ.ತೋಟದಾಗ ನಿಂತು ಗುಲಾಬಿ ಮುಡಿತಾಳ ......