Tuesday, October 31, 2006

ಬಾರ್ ಬಾರ್ ಎಲ್ನೋಡಿ ಬಾರ್

-ಗಿರೀಶ ಪಿ. ಮೆಟಗುಡ್ಡಮಠ,ವಿಜಯನಗರ, ಬೆಂಗಳೂರು.

ನನ್ನ ಪ್ರೀತಿಯ ಹುಡುಗಿ ಚಿತ್ರದಲ್ಲಿ ಖ್ಯಾತ ಗಾಯಕಿ ಶ್ರೀಮತಿ ಬಿ. ಜಯಶ್ರೀ ಅವರು ಹಾಡಿರುವ "ಕಾರ್ ಕಾರ್"ಧಾಟಿಯಲ್ಲಿ.

ಪ್ರೀತಿಯಿಂದ "ಸ್ವಾಮಿ" ಎಂದು ಕರೆಯಲ್ಪಡುವ ನಮ್ಮ ಸ್ನೇಹಿತ ಬಿ.ಇ.ಯಿಂದ ಸಹಪಾಠಿ ಗಿರೀಶ, ಕನ್ನಡ ಭಾಷೆ, ನೆಲ, ನುಡಿಗಾಗಿ ಯಾವಾಗಲೂ ಮುಂದು. ಹುಬ್ಬಳ್ಳಿಯಲ್ಲಿ ತನ್ನ ಸಂಪೂರ್ಣ ವಿದ್ಯಾಭ್ಯಾಸ ಮುಗಿಸಿರುವ ಸ್ವಾಮಿಗೆ ಬರವಣಿಗೆಯಲ್ಲಿ ಒಳ್ಳೆಯ ಹಿಡಿತವಿದೆ. ಆದರೆ ಬರೆಯಲು ಏಕೊ ಸಮಯವಿಲ್ಲ..! ಇವರ ವಿಶೇಷ ಅಂದರೆ ಯಾವುದೇ ಒಂದು ವಿಷಯದ ಬಗ್ಗೆ ಇವರಿಗಿರುವ ಇರುವ ಆಳವಾದ ಜ್ಞಾನ ಹಾಗೂ ಅದಕ್ಕೆ ಪೂರಕವಾದ ಅಂಕಿ-ಅಂಶಗಳು ಮತ್ತು ಅದನ್ನು ಬರಹದ ರೂಪದಲ್ಲಿ ಹೊರಹೊಮ್ಮಿಸುವ ಸಾಮರ್ಥ್ಯ.





ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್***

ಬೆಂಗಳೂರ್ ಹುಡುಗಿ :
ಇವಿನಿಂಗ್ ಡ್ರೈವು ಮಾಡಿಕೊಂಡು,
ಪಾರ್ಟಿ ಅಂತ ಹೇಳಿಕೊಂಡು,
ಬಿಜನೆಸ್ ಅಂತ ಗುಂಡು ಹಾಕ್ತಾರೋ...

ಹುಬ್ಬಳ್ಳಿ ಹುಡುಗ :
ನಮ್ಮೂರಲ್ಲಿ ಹಂಗೇನಿಲ್ಲ ಬ್ರಾಂಡಿ,
ರಮ್ಮು, ಜಿನ್ನು, ವಿಸ್ಕಿಏನೇ ಇರಲಿ ಕುಡಕೊಂಡ್ ಹೋಗ್ತಾರೇ....

ಬೆಂಗಳೂರ್ ಹುಡುಗಿ :
ಸೊಷಿಯಲ್ ಸ್ಟೇಟಸ್ ಅಂದುಕೊಂಡು,
ನಾಲ್ಕು ಪಟ್ಟು ದುಡ್ಡು ಕೊಟ್ಟು,ರಾತ್ರಿ ಇಡೀ ಡಾನ್ಸು ಮಾಡ್ತಾರೋ,

ಹುಬ್ಬಳ್ಳಿ ಹುಡುಗ :
ನಮ್ಮೂರಲ್ಲಿ ಹಂಗೇನಿಲ್ಲ ಬಾರಲ್ಲ ಜಾಗ ಸಾಕಾಗೊಲ್ಲ,
ಕೌಂಟರಲ್ಲೇ ಕುಡುದು ಸ್ನ್ಯಾಕ್ಸು ತಿಂತಾರೆ ***೧

ಬೆಂಗಳೂರ್ ಹುಡುಗಿ :
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್
ಬಾರಿಂದೆ ಕಾರ್ಬಾರು .. ಬಾರಿಂದೆ ದರ್ಬಾರುಊರಿನ ತುಂಬ ಬರಿಯ ಬಾರಗಳೋ

ಹುಬ್ಬಳ್ಳಿ ಹುಡುಗ :
ನಮ್ಮೂರ ಕಥೆ ಗೊತ್ತಾ?
ಗೋವಾ ಒರಿಜಿನಲ್ ಮಾಲೆ ಇದ್ದರೂ,
ಸರ್ಕಾರದ್ದೇ ಗುಂಡು ಇದ್ದರೂ,ಕಮರಿಪೇಟೆ ಕಂಟ್ರಿ ಕುಡಿದು ಹಾಯಾಗಿರ್ತಾರೆ

ಬೆಂಗಳೂರ್ ಹುಡುಗಿ :
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ
ಬಾರ್ಬಾರಿಗೆ ಹೊಡೆದಾಟ ಬಾರಿಗೆ ಬಡಿದಾಟಬಾರೆ ಇಲ್ಲಿ ದೈವ ಕಾಣಿರೋ

ಹುಬ್ಬಳ್ಳಿ ಹುಡುಗ :
ನಮ್ಮ ಕಡೆ ಏನು ಅಂತಾರೆ ಗೊತ್ತಾ?
ಬಾರಲ್ಲಿ ಕುಡಿದ್ರೆ ತುಟ್ಟಿಯಾಗುತ್ತೆ,
ಓರಿಜಿನಲ್ ಕುಡುದ್ರೆ ನಿಶೆಯಾಗೊಲ್ಲ,
ಲೊಕಲ್ ಡಿ-ಮಾಲ್ ಕುಡುದ್ರೆ ಮಾತ್ರ ನಿದ್ದೆ ಮಾಡ್ತಾರೆ

ಬೆಂಗಳೂರ್ ಹುಡುಗಿ :
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ
ಬಾರ್ಬಾರೆ ನಿನ್ನ ತಾಯಿ,
ಬಾರೆ ನಿನ್ನ ತಂದೆಬಾರೆ
ಇಲ್ಲಿ ಲೈಫೂ ಕಾಣಿರೋ....

ಹುಬ್ಬಳ್ಳಿ ಹುಡುಗ :
ಬಾರಿಗಿಂತ ಗುಂಡು ಮುಖ್ಯ,
ಗುಂಡಿಗಿಂತ ನಿಶೆಯು ಮುಖ್ಯ ಅನ್ನೊ ನೀತಿ ನಮ್ಮ ಊರಲ್ಲಿ

Sunday, October 29, 2006

ಹೆಸರಿನಲ್ಲಿ ಹೆಮ್ಮೆ, ಹಾಸ್ಯ, ಹತಾಶ!!

- ಗಿರೀಶ. ಬೆಳಂದೂರ, ವ್ಯಾಂಕೂವರ್, ಕೆನಡಾ

ಮಿತ್ರ ಗಿರೀಶ ಓದಿದ್ದು ಹುಬ್ಬಳ್ಳಿಯ ಬಿ.ವಿ.ಬಿಯಲ್ಲಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮೂರುವರೆ ವರ್ಷ ಸೇವೆ ಸಲ್ಲಿಸಿದ ನಂತರ ಕಳೆದ ಎಂಟುವರೆ ವರ್ಷಗಳಿಂದ ಸಾಫ್ಟ್‌ವೇರ್ ರಂಗದಲ್ಲಿದ್ದಾರೆ. ಜೀವನವನ್ನು ತಮ್ಮದೇ ಆದ ಒಂದು ಕೌತುಕದ ಕಾತರದ ದೃಷ್ಟಿಯಲ್ಲಿ ನೋಡುವ ಸದ್ದಾಮ್, ಇಲ್ಲಿ ಒಂದು ಸರಳ ಹೆಸರಿನಲ್ಲಿ ಏನೆಲ್ಲ ರಹಸ್ಯ, ಹಾಸ್ಯ, ಹೆಮ್ಮೆ, ಹತಾಶ ಅಡಗಿದೆಯೆಂಬುದನ್ನು ನಮ್ಮ ಈ ಪಕ್ಕಾ ಉತ್ತರ ಕರ್ನಾಟಕದ ಭಾಷೆಯಲ್ಲಿ ತಮ್ಮೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿದ್ದಾರೆ.



ಪರದೇಸಿಗಳು ಅಲಿಯಾಸ್ ವಿದೇಶಿಗಳು ಅಲಿಯಾಸ್ ಫಾರಿನ್ ಮಂದಿ ನಮ್ಮ ಭಾರತೀಯ ಹೆಸರುಗಳನ್ನ ಉಚ್ಚಾರ ಮಾಡಾಕ ಒದ್ದಾಡೋದು ಕಟು ಸತ್ಯ. ಆದರ ನಮಗ ನಮ್ಮ ಹೆಸರುಗಳನ್ನ ಇವರು ಬರೋಬರೀ ಪ್ರೋನೌನ್ಸ್ ಮಾಡಂಗಿಲ್ಲ ಅನಸಬಹುದು. ಆದರ ಇದು ಎಲ್ಲಾ ದೇಶದವರಿಗೊ ಅನ್ವಯ ಆಗೋ ಅಂತ ವಿಚಾರ. ನಮಗ ಅವ್ರದ್ದು ಸರಿ ಅನಸಂಗಿಲ್ಲ, ಅವ್ರಿಗೆ ನಮ್ದು ಸರಿ ಅನಸಂಗಿಲ್ಲ.

ನಮ್ಮ ಹೆಸರ ಅರ್ಥ ಅಗಾಕ, ಸ್ಪೆಲ್-ಔಟ್ ಮಾಡಾಕ ಬೇಕು. ಎಷ್ಟೋ ಸಲ ಈ ಅಮೇರಿಕದಲ್ಲಿ ಪುರಾತನ ಕಾಲದಿಂದಲೂ ಇರುವ ಜನರ ಹೆಸರನ್ನsss ಇಲ್ಲಿಯೋರು ಸ್ಪೆಲ್-ಔಟ್ ಮಾಡಾಕ ಹೇಳತಾರ. ನನಗಂತೂ ಇಷ್ಟು ರೂಢಾ ಆಗೇತಿ ಅಂದ್ರ.. ಯಾವರ (ಅದರಾಗ ಫೋನ್‌ನ್ಯಾಗ) ಹೆಸರ ಕೇಳಿದ ಅಂದ್ರ .. ಬರೀ “ಗಿರೀಶ್” ಅಂತ ಹೇಳೋದss ಬಿಟ್ಟು ಬಿಟ್ಟೇನಿ.. ಕೇಳಿದ್ ಕೂಡ್ಲೇ ಸ್ಪೆಲ್-ಔಟ್ ಚಾಲೂ ಮಾಡೇ ಬಿಡತನಿ.. GIRISH - “G” - “I” - “R” - “I” - “S” - “H” ಅಂತ.. ಮೊನ್ನೆ ಒಮ್ಮೆ ಹಿಂಗ ಯಾವದೋ ಬ್ಯಾಂಕ್‌ಗೆ ಫೋನ್ ಹಚ್ಚಿ, ಹೆಸರು ಕೇಳಿದಾಗ, ಸ್ಪೆಲ್ ಮಾಡಾಕ ಚಾಲೂ ಮಾಡಿದೆ.. ಅವ ಅರ್ಧಕ್ಕ ನಿಂದ್ರಿಸಿ “got it sir” ಅಂದ. ನೋಡಿದ್ರ, ಆ ಕಾಲ್ ಬೆಂಗಳೂರಿಗೆ ಫಾರ್‌ವರ್ಡ್ ಆಗಿತ್ತು. ಎಲಾ ಇವನ.. ಈ ಕಾಲ್ ಸೆಂಟರ್‍ನವರ ಕೂಡ, ಅಮೆರಿಕದಿಂದ ನಮ್ಮ ಹುಬ್ಬಳ್ಳಿ ಭಾಷೆಯಲ್ಲಿ “ಏನ್ರಿ, ಹೆಂಗದೀರ್ರಿ, ಮಳಿ-ಗಿಳಿ ಹೆಂಗೈತ್ರಿ ಹುಬ್ಳ್ಯಾಗ” ಅಂತ ಮಾತಾಡಬಹುದಾದ ಕಾಲ ದೂರ ಇಲ್ಲ ಅನುಕೊಂಡೆ!!!

ನನಗ ನನ್ನ ಹೆಸರು ಸ್ಪೆಲ್ ಮಾಡಿ ಮಾಡಿ ಸಾಕಾಗಿ ಹೋಗೇತಿ. ಈ ತೆಲಗೂ ಮಂದೀದು ಇಷ್ಟಿಟ್ಟು ಉದ್ದಾ ಹೆಸರು ಇರತಾವ, ಅವರು ಹೆಂಗ ಮ್ಯಾನೇಜ್ ಮಾಡ್ತಾರೋ ಅನ್ನಿಸ್‌ತೈತಿ. ನಮ್ಮ ಕಂಪನ್ಯಾಗ ನಮ್ಮ ಕೆಲ ತೆಲುಗು ಮಿತ್ರರಿದ್ದರು.. ಒಬ್ಬವಾ.. “ನುನ್ನಾ ಸತ್ಯಶಂಕರ ವೆಂಕಟೇಶ್ವರ ದುರ್ಗಾ ಪ್ರಸಾದ್”.. ಇನ್ನೊಬ್ಬವ.. “ಕೊಲ್ಲೂರು ವೆಂಕಟಸಾಯಿ ಲಕ್ಷ್ಮಿ ನರಸಿಂಹ ರಾವ್”. ಇವರು ಅದು ಹೆಂಗ ಸ್ಪೆಲ್ ಮಾಡತಿದ್ರೋ ದೇವರಿಗೇ ಗೊತ್ತು.

ಅದಕ್ಕ ಯಾರೋ ಒಂದು ಜೇಮ್ಸ್ ಬಾಂಡ್ ಜೋಕ್ ಬರದಾರ ಇದರ ಬಗ್ಗೆ : ಜೇಮ್ಸ್ ಬಾಂಡ್ ಮತ್ತ ಒಬ್ಬ ತೆಲಗು ಮನಷ್ಯಾ ವಿಮಾನದಾಗ ಹೊಂಟಿದ್ರಂತ. ತೆಲಗು ಮನಷ್ಯಾ ಬಾಂಡ್‌ಗ ನಿನ್ನ ಹೆಸರೇನು ಅಂತ ಕೇಳಿದನಂತ.. ಅದಕ್ಕ ಬಾಂಡ್, ತನ್ನ ಮಾಮೂಲಿ ಸಿನಿಮಾ ಶೈಲಿಯಲ್ಲಿ “ಬಾಂಡ್” - “ಜೇಮ್ಸ್ ಬಾಂಡ್” ಅಂದನಂತ. ಆಮ್ಯಾಲ ಬಾಂಡ್ ತಿರುಗಿ ನಿನ್ನ ಹೆಸರೇನು ಅಂತ ತೆಲುಗು ಮನಷ್ಯಾಗ ಕೇಳಿದನಂತ.. ತೆಲುಗು ಮನಷ್ಯಾ ಬಾಂಡ್‌ನ ಶೈಲಿಯಲ್ಲೇ ಹೇಳೋಣ ಅಂತೇಳಿ : “ಪ್ರಸಾದ್” - “ದುರ್ಗಾ ಪ್ರಸಾದ್” - “ನರಸಿಂಹಲು ದುರ್ಗಾ ಪ್ರಸಾದ್” - “ಅನಂತರಾಯಲು ನರಸಿಂಹಲು ದುರ್ಗಾ ಪ್ರಸಾದ್” - “ಕೋದಂಡರಾಮುಲು ಅನಂತರಾಯಲು ನರಸಿಂಹಲು ದುರ್ಗಾ ಪ್ರಸಾದ್”. . . ಬಾಂಡ್ ಮಾಮೂಲಿ ಫಿಲ್ಮೀ ಸ್ಟೈಲ್‌ನ್ಯಾಗ ಮಂಗಮಾಯ ಆದನಂತ.

ನಮ್ಮ ಪಾಯಿಂಟನ ಸಂಬಂಧಿ ಅಜಿತ್ ಪೂಜಾರ್ ಅವರು ಹೇಳಿದ ಒಂದು ಸತ್ಯ ಘಟನೆ. ಅವರ ಮಿತ್ರ “ಅಪ್ಪಾ ಪಿಳ್ಳೈ” ಅನ್ನೋ ಅಮೇರಿಕದಲ್ಲಿರುವರೊಬ್ಬರು, ಫೋನ್‌ನ್ಯಾಗ ತಮ್ಮ ಡೀಟೈಲ್ಸ್ ಕೊಡಾಕತ್ತಿದ್ರಂತ. ಫೋನ್‌ನ್ಯಾಗ ಆಕಡೆ ಇದ್ದsಕಿ ಇವರ ಹೆಸರು ಕೇಳಿರಬೇಕು. ಅದಕ್ಕ ಇವರು “ಅಪ್ಪಾ ಪಿಳ್ಳೈ” ಅಂತ ಒಂದ ಪಟಿಗೆ ಹೇಳಿದ್ರಂತ. ಆಕಿಗೆ ಏನೂ ತಿಳಿದಿಲ್ಲ ಅನ್ನಸ್ತೈತಿ, “ಸ್ಪೆಲ್-ಔಟ್” ಮಾಡ್ರಿ ಅಂದಿರಬೇಕು. ಅದಕ್ಕ ಇವರು A for Apple, P for Pineapple, P for Pineapple, A for Apple, P for Pineapple ಅಂತ ಒಂದ ಸಮನೆ ಬಡಬಡಿಸಿದರಂತ. ಆಕಿ ನಗುತ್ತಾ ನಡಕ ಅವರನ್ನ ನಿಂದ್ರಿಸಿ, wait .. wait.. wait.. first tell me, how many apples and pineapples are there in your name??!!! ಅಂದಳಂತ.

ನಮ್ಮ ಮತ್ತೊಬ್ಬ ಸಹದ್ಯೋಗಿ ಗಗನ್ .. ಸ್ಪೆಲ್-ಔಟ್ ಮಾಡು ಅಂದಾಗ “G for Gagan” ಅಂದು.. ಸುತ್ತಮುತ್ತ ಇರೋರ್ನೆಲ್ಲ ಘೊಳ್ ಅಂತ ನಗೋ ಹಂಗ ಮಾಡಿದ್ದ.

ಮಂದಿ ಇಷ್ಟೆಲ್ಲಾ ಕಷ್ಟಪಟ್ಟು ಹೆಸರು ಹೇಳಿ, ಬರಸಿ, ಆಮ್ಯಾಲ ಬರೋ ಪೊಸ್ಟ್‌ಗಳಲ್ಲಿ ಪ್ರಿಂಟ್ ಆದ ತಮ್ಮ ಹೆಸರನ್ನು ನೋಡಿ ಬೆಚ್ಚಿ ಬೀಳೋ ಘಟನೆಗಳೆಷ್ಟೋ. ಅಜಿತ್ ಪೂಜಾರರ ಹೆಸರು Ajit Uja ಅಂತ ಪ್ರಿಂಟ್ ಆಗಿತ್ತಂತ. ಅದು ಹೆಂಗ ಅಷ್ಟೊಂದು ಅಕ್ಷರಗಳನ್ನ ನುಂಗಿದರೋ ಗೊತ್ತಿಲ್ಲ. ನನ್ನ ಮನೆಯವಳ ಅಣ್ಣ - ಶ್ರೀರಾಮ.. ಈ ಹೆಸರನ್ನ ಫ್ರೀರಾಮ ಮಾಡಿದ್ದರು. ಇನ್ನು “M” ಇದ್ದಿದ್ದು “N” ಆಗುವದು, “B” ಇದ್ದಿದ್ದು “P” ಆಗುವದು ಭಾಳ ಮಾಮೂಲಿ, ನಾವು ಹೇಳೋ “A” ಅವರಿಗೆ ಅರ್ಥ ಆಗೋದsss ಇಲ್ಲ, “A for Apple” is compulsory!!

ನಾನು ಸೌತ್ ಆಫ್ರಿಕಾದಲ್ಲಿದ್ದಾಗ ನಮ್ಮೊಂದಿಗಿದ್ದ ಮನೋಜ್, ರಾಜ್, ಬಾಲಾಜಿ ಮುಂತಾದವರನ್ನು ಅಲ್ಲಿಯವರು ಮನೋಯ್, ರಾಯ್, ಬಾಲಾಯಿ ಅಂತ ಕರೀತಿದ್ರು. ನಿಮಗೆಲ್ಲಾ ಗೊತ್ತಿರ ಬೇಕು, Kronje ಅನ್ನೊ ಅಲ್ಲಿನ ಮಾಜಿ ಕ್ಯಾಪ್ಟನ್‌ನನ್ನು “ಕ್ರೋನಿಯೆ”, Boje ಅನ್ನೊ ಒಬ್ಬ ಬೌಲರನನ್ನು “ಬೋಯೆ” ಅಂತ ಅವರು ಕರೀತಾರ. ಎಲ್ಲೆಲ್ಲಿ “J” ಬರತೈತೋ ಅಲ್ಲೆಲ್ಲಾ “Y” ಇರೋ ಗತೆ ಪ್ರೊನೌನ್ಸ್ ಮಾಡತಾರ ಅವರು!!

ಹಿಂಗs ಸ್ಪಾನಿಶ್ ಪ್ರಭಾವ ಇರುವ ಜಾಗಗಳಲ್ಲಿ, ಎಲ್ಲೆಲ್ಲಿ “J” ಬರತೈತೋ ಅಲ್ಲೆಲ್ಲಾ “H” ಹಾಕತಾರ ಅವರು!! ಮಂಜ ಅನ್ನುವವರನ್ನ ಮನ್‌ಹ ಅಂತ ಹೇಳಿದ್ದು ಕೇಳೇನಿ. ಅದಕ್ಕ ಇನ್ನೊಂದು ಜೋಕ್ ಬರದಾರ.. (ಹಿಂದಿನ ಬಾಂಡ್ ಜೋಕ್ ಮುಂದುರಿಸಿ..) ತೆಲುಗೂ ನಾಮಾವಳಿ ಕೇಳಿ ಮಾಯವಾದ ಬಾಂಡ್ ಎಷ್ಟು ಹೊತ್ತು ಟಾಯಿಲೆಟ್‌ನ್ಯಾಗ ಕುಂತಾನು..!? ತಿರುಗಿ ಸೀಟಿಗೆ ಬಂದನಂತ. ಬಂದಕೂಡಲೇ ತೆಲುಗ ಮಾತು ಮುಂದುವರಿಸಿದನಂತ. ಮಾತಿನ ನಡುವೆ ಬಾಂಡ್ ಕೇಳಿದನಂತ.. ಎಲ್ಲಿಗೆ ಹೊಂಟಿ ಅಂತ.. ಅದಕ್ಕ ತೆಲಗೂ ಹೇಳಿದನಂತ.. “ಆಯ್ ಯಾಮ್ ಗೋಯಿಂಗ್ ಟು ಸ್ಯಾನ್ ಜೋಸ್ (San Jose)”. ಜಗತ್ತೆಲ್ಲಾ ತಿರುಗಾಡಿದ ಬಾಂಡ್‌ಗ ಗೊತ್ತಾತಂತ ಇವ ಏನ್ ಹೇಳಾಕತ್ತಾನು ಅಂತ.. ಅದಕ್ಕ ಅವ ನಕ್ಕೊಂತ ಹೇಳಿದನಂತ.. ಅದು ಸ್ಯಾನ್ ಜೋಸ್ ಅಲ್ಲ ಸ್ಯಾನ್ ಹೋಸೆ.. ಹೋಸೆ ಅಂತ ಪ್ರೊನೌನ್ಸ್ ಮಾಡಬೇಕು ಅಂದನಂತ. ಹಂಗ ಮಾತು ಮುಂದುವರೀತಂತ.. ಅಮ್ಯಾಲ ಬಾಂಡ್, ಯಾವಾಗ ವಾಪಸ್ ಇಂಡಿಯಾಕ್ಕ ಹೊಂಟಿ ಅಂತ ತೆಲುಗೂನ ಕೇಳಿದನಂತ.. ಅದಕ್ಕ ತೆಲುಗು ಸ್ವಲ್ಪ ಯೋಚನಿ ಮಾಡಿ.. “ಹೂನ್ ಆರ್ ಹುಲೈ” (June or July) ಅಂದನಂತ!!!!

ನನ್ನ ಸುತ್ತಮುತ್ತ ಕೆಲಸ ಮಾಡುವ ಚೈನಾ, ಕೊರಿಯಾದ ಮಂದಿಗಳ ಹೆಸರೋ - ಸಿನ್, ಜುನ್, ಟ್ಯಾಂಗ್, ಪಿಂಗ್, ಪೆಂಗ್.. ಇನ್ನೂ ವಿಚಿತ್ರ ವಿಚಿತ್ರ ಇರತಾವ. ನನ್ನ ಸಂಬಂಧಿ ಈ ಹೆಸರುಗಳ ಬಗ್ಗೆ ಒಂದು ಜೋಕ್ ಹೇಳತಿದ್ದ. ಮಗು ಹುಟ್ಟಿದ ಕೂಡಲೇ ಅಡುಗಿ ಮನೆಯಾಗ ಯಾವ್‌ದಾರ ಬಾಂಡೆ-ಸಾಮಾನ ಎತ್ತಿ ಒಗಿತಾರಂತ.. ಅದು ಯಾವ ಸೌಂಡ್ ಬರತೈತೊ ಆ ಹೆಸರು ಇಡತಾರಂತ!! ನಮಗೋ ಇವರ ಹೆಸರುಗಳು ವಿಚಿತ್ರ ಅನ್ನಿಸ್ತಾವ ಆದ್ರ ಅವರಿಗದು ಸಹಜ!!

ಈ ಹೆಸರಿನಲ್ಲಿ ಹಾಸ್ಯಕ್ಕ ಚೈನಾಕ್ಕ ಹೋಗೋದು ಬ್ಯಾಡ... ಚೆನ್ನೈನಿಂದ ಬಂದ ನಮ್ಮ ಕಂಪನಿಯ ಒಬ್ಬಕಿ ಹೆಸರು Rathika. ಏನಪ ಇದು “ರಥಿಕ” ಅಂದ್ರ ಅಂತ ನನಗ ವಿಚಿತ್ರ ಅನಿಸಿತ್ತು. ನೋಡಿದರ ಅದು “ರಾಧಿಕಾ”. ತಮಿಳಿನಲ್ಲಿ ಭಾಳ ಅಕ್ಷರಗಳsssಇಲ್ಲಂತ. ಅವರು “ದ” ಮತ್ತ “ತ” ಕ್ಕ ಒಂದ ಅಕ್ಷರ ಬಳಸ್ತಾರಂತ. ಹಿಂಗ ಕ, ಗ, ಹ ಕ್ಕೆಲ್ಲಾ ಒಂದsss ಅಕ್ಷರ ಅನ್ನಿಸ್ತೈತಿ. ಮಗೇಶ್ ಅಥವಾ ಮಕೇಶ್ ಅಂದ್ರ ಮಹೇಶ್!! ರಾಗುಲ್ ಅಥವಾ ರಾಕುಲ್ ಅಂದ್ರ ರಾಹುಲ್!!! ವಿಚಿತ್ರ ಆದರೂ ಸತ್ಯ. ನಮ್ಮಣ್ಣ ಒಂದು ಘಟನೆ ಹೇಳತಿದ್ದ. ಒಬ್ಬವ ಮದ್ರಾಸಿ ಅವನ ಹತ್ರ “ಕಾಂತಿ ನಗರ್” ಎಲ್ಲೈತಿ ಅಂತ ಕೇಳಿಕೊಂಡು ಬಂದಿದ್ದನಂತ. ಎಲಾ ಇವನ.. ಇಷ್ಟು ವರುಷದಿಂದ ಶಿಮೊಗ್ಗಾದಾಗ ಅದನಿ.. ಕಾಂತಿ ನಗರ್ ಅಂತ ಕೇಳಿಲ್ಲಲ ಅಂತ ತೆಲಿಕೆಡಿಸಿಕೊಂಡ.. ಸುತ್ತಿ ಬಳಸಿ ಕೇಳಿದಮ್ಯಾಲ ಗೊತ್ತಾತಂತ.. ಅವಾ ಕೇಳಾಕತ್ತಿದ್ದು “ಕಾಂತಿ ನಗರ್” ಅಲ್ಲ, “ಗಾಂಧಿ ನಗರ್”!

ಹಿಂಗ ನಾನಾ ಕಡೆಗಳಲ್ಲಿ ನಾನಾ ತರಹದ ಅನುಭವ ಆಗತೈತಿ. ಈ ಗ್ಲೋಬಲೈಸೇಷನ್ ಗಾಳಿಯಲ್ಲಿ, ದೇಶ ವಿದೇಶಗಳಲ್ಲಿ ಪಸರಿಸಿರುವ ನಮ್ಮ ಜನ ತಮ್ಮ ಮೂಲ ಹೆಸರುಗಳ ಬಗ್ಗೆ ಹೆಮ್ಮೆ, ಹಾಸ್ಯ, ಹತಾಶ ಈ ಎಲ್ಲಾ ಭಾವನೆ ಹೊಂದುವುದು ಸಹಜ. ಕೆಲವರು ಪ್ರವಾಹದಾಗ ಕೊಚ್ಚಿಹೋಗಿ ತಮ್ಮ ಹೆಸರನ್ನ ಚೇಂಜ್ ಮಾಡ್ಕೋತಾರ. ಇಲ್ಲಿ ನಾನು ಕೆಲಸ ಮಾಡೋ ಕಡೆ, “ಜಾನ್ ಕಾರ‌ವಾರ್” ಅನ್ನೋ ಹೆಸರನ್ನ ಭಾಳಕಡೆ - ಮೀಟಿಂಗ್‌ನ್ಯಾಗ, ಅಲ್ಲಿ, ಇಲ್ಲಿ ಕೇಳಿದ್ದೆ. ಯಾರಪಾ ಇವರು “ಕಾರ‌ವಾರ್”, ನಮ್ಮ ಕಡೆ ಹೆಸರು ಅನ್ನಿಸತೈತಲ್ಲಾ ಅಂತಾ ವಿಚಾರ ಮಾಡಿದ್ದೆ. ಕೊನೆಗೆ ಗೊತ್ತಾತು.. ಜನಾರ್ಧನ, ಜಾನ್ ಆಗ್ಯಾರ. ಭಾರೀ "ಜಾಣ್" ಅದಾರ ಬಿಡು ಅನುಕೊಂಡೆ!!

ಹೆಸರಿನ ಬಗ್ಗೆ ಕಾಂಟ್ರಾವರ್ಸಿ ಆಗಾಗ ಕೇಳ್ತನsss ಇರ್ತವಿ. ಲವಪುರ ಲಾಹೋರ್ ಆದಾಗಿನದ್ದರಿಂದ ಹಿಡಿದು, ಮದ್ರಾಸ್‌ನ್ನು ಚೆನ್ನೈ ಅಂತ ತಿದ್ದಿದ್ದು, ಬಾಂಬೆಯನ್ನು ಮುಂಬೈ ಅಂತ ತಿದ್ದಿದ್ದು, ಕಲ್ಕತ್ತಾವನ್ನು ಕೊಲ್‌ಕೋಟಾ ಅಂತ ತಿದ್ದಿದ್ದು, ಇತ್ತೀಚೆಗೆ ಬ್ಯಾಂಗಲೋರನ್ನು ಬೆಂಗಳೂರು ಅಂತ ಮಾಡಾಕ ಹೊರಟ ರಾಜಕಾರಣಿಗಳ ಮಾತು ಕೇಳೇವಿ. ಬಂಡೋಪಾಧ್ಯಾಯ -ಬ್ಯಾನರ್ಜಿ, ಚಟ್ಟೋಪಾಧ್ಯಾಯ - ಚಟರ್ಜಿ, ಮುಖ್ಯೋಪಾಧ್ಯಾಯ - ಮುಖರ್ಜಿ, ಧಾರವಾಡ - ಧಾರ್ವಾರ್, ಮಡಿಕೇರಿ ಮರಕೆರಾ (ಕೆರಾ ಅಂದ್ರ ಗೊತ್ತಲ!!!) ಅರ್ಥವೇ ಇಲ್ಲದ ಹೆಸರುಗಳು ಚಾಲ್ತಿಯಲ್ಲಿ ಬಂದುಬಿಟ್ಟಾವು. ಜೂಹೀ ಚಾವ್ಲಾ, ಕನ್ನಡಿಗರಿಗೆ ತನ್ನ ಹೆಸರು ಹೇಳಾಕ ಬರಂಗಿಲ್ಲ ಅಂತ “ಜೂಲಿ” ಅಂತ ಹೆಸರು ಚೇಂಜ್ ಮಾಡಿಕೊಂಡೇನಿ ಅಂದು ಕನ್ನಡಿಗರನ್ನ ಕೆಣಕಿದ ಬಗ್ಗೆ ಕೇಳೇವಿ. ಈಗಿನ ಕಾಲದ ಯುವ ಪೀಳಿಗೆಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವ ಹುಡುಗರು ಹೆಸರನ್ನ ಬದಲಾಯಿಕೊಂಡಿದ್ದನ್ನ ಕೇಳ್ತವಿ.

ಇದು ಖರೆ ಅಂದ್ರೂನೂ ಭಾಳ ಸೀರಿಯಸ್ಸಾಗಿ ತಾಸುಗಟ್ಲೆ ಡಿಬೇಟ್ ಮಾಡೋ ಅಂತಾ ವಿಚಾರ. ವಿದ್ಯಾನಂದ ಶೆಣೈ ಅವರ “ಭಾರತ ದರ್ಶನ” ಕೇಳಿದೋರಿದ್ರ ಡಿಬೇಟಿಗೆ ರೆಡಿ ಆಗಿ ನಿಲ್ಲಬಹುದು. ನಾವು ಕಾಲೇಜ್‌ನ್ಯಾಗ ಇದ್ದಿದ್ರ, ಅದು ಸರಿ ಇದು ಸರಿ ಅಂತ, ರೆಡ್ಡಿ ಕ್ಯಾಂಟೀನ್ ಇಲ್ಲಾ ಹಾಸ್ಟೆಲ್‌ನ್ಯಾಗ ತಾಸುಗಟ್ಲೆ ಗದ್ಲ ಮಾಡಿ, ಲಾಸ್ಟಿಗೆ ಚಪ್-ಚಪ್ಪಲ್‌ಲೆ ಹೊಡದಾಡೋ ಮಟ್ಟಕ್ಕ ಬರತಿದ್ವಿ!!! ಈಗ ನಮ್ಮ ಬಳಗದಾಗ ಭಾಳ ಮಂದಿಗೆ ಈ-ಮೈಲ್ ಬರಿಯಾಕsss ಟಾಯಮ್ಮ ಇಲ್ಲ. ಇನ್ನು ಕೆಲವರು ಪ್ರವಾಹದಾಗ ಕೊಚ್ಚಿಹೋಗಿ ತಮ್ಮ ಮೂಲ ಅಭಿಮತನss ಬದಲಾಯಿಸಿರಬಹುದು. ಇನ್ನು ಕೆಲವರು, ಹೊಡದಾಡಿ ಏನೂ ಉಪಯೋಗ ಇಲ್ಲ ಅಂತ ಸುಮ್ಮನಿರಬಹುದು.

ಅದಕ್ಕ ಈ ಲೇಖನನ ನಿಮಗ ಹೆಂಗ ಬೇಕೋ ಹಂಗ ತೊಗೋರಿ.. ಹೆಮ್ಮೆಯಾಗಿ.. ಇಲ್ಲಾ ಹಾಸ್ಯವಾಗಿ.. ಇಲ್ಲಾ ಹಗುರವಾಗಿ ಇಲ್ಲಾ ಹತಾಶೆಯಾಗಿ!!!!

Saturday, October 28, 2006

ಪ್ರಿಯಾರಿಟಿಗಳು ಮತ್ತು ಸಂಬಂಧಗಳ ನಡುವೆ ನಾವು ನೀವು..


ಪ್ರಕಾಶ ಸಿ ರಾಜಗೋಳಿ. ವಿಜಯಾ ಬ್ಯಾಂಕ್ ಕಾಲನಿ, ಬನ್ನೇರುಘಟ್ಟ ರಸ್ತೆ, ಬೆಂಗಳೂರು.
ಸಧ್ಯ ಬೆಂಗಳೂರಿನ ಬ್ರಿಸಲಕಾನ್ ಇಂಡಿಯಾ ಸಂಸ್ಥೆಯಲ್ಲಿ ಎಸ್.ಏ.ಪಿ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಸ್ಯಾಪ್ ರಾಜ ಕನ್ನಡದಲ್ಲಿ ಲೇಖನ ಬರೆಯುವ ಪ್ರಮುಖ ಹವ್ಯಾಸ ಹೊಂದಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆಯಲ್ಲದೇ ಕೆಲ ಕಾರ್ಯಕ್ರಮಗಳು ಆಕಾಶವಾಣಿ ಧಾರವಾಡ ಮತ್ತು ಬೆಂಗಳೂರು ಕೇಂದ್ರಗಳಿಂದ ಪ್ರಸಾರಗೊಂಡಿವೆ.




ತಾಯಿಗೆ ತನ್ನ ಮಗುವೇ ಸರ್ವಸ್ವ. ಒಂದು ಕ್ಷಣವೂ ಬಿಟ್ಟಿರಲಾರದ ಅನಿವಾರ್ಯತೆ, ಅಕ್ಕರತೆ, ಮಮತೆ, ಪ್ರೀತಿ. ಅದು ನಕ್ಕರೆ ಸಂತೋಷ ಅತ್ತರೆ ಕರುಳು ಕಿತ್ತು ಬಂದಂಥ ಅನುಭವ. ಮಗು ತಪ್ಪು ಮಾಡಿದರೆ ಹುಸಿಮುನಿಸು ತೋರಿಕೆ, ಇಲ್ಲಾ ಸ್ವಲ್ಪ ಮಾತಿನ ಗದರಿಕೆ, ಕೈಮೀರಿದರೆ ಪೆಟ್ಟು ನೀಡುವದು ಅನಿವಾರ್‍ಯ. ಮಗು ಬೆಳೆದಂತೆಲ್ಲಾ ಈ ಅಕ್ಕರತೆ, ಮಮತೆ ಸ್ವಲ್ಪ ಮಾಯವಾಗುವದು ಸಹಜ. ಚಿಕ್ಕ ಮಗು ದೇವರ ಸಮಾನ. ಏನು ಮಾಡಿದರೂ ಸರಿಯೇ. ಸಹಿಸಿಕೊಳ್ಳುತ್ತಾಳೆ ತಾಯಿ. ಆದರೆ ಬರುಬರುತ್ತಾ ಮಗುವಿನ ಅವೇ ತಪ್ಪುಗಳು ದೊಡ್ಡದಾಗಿ ಕಾಣಿಸುತ್ತವೆ. ಶಿಕ್ಷೆಗೆ ಮೂಲವಾಗುತ್ತವೆ. ಮಗುವಿಗೂ ಸಹ ಹಾಗೆಯೇ ತನ್ನ ತಾಯಿ ತಂದೆ ಇಲ್ಲವೇ ಅಜ್ಜ, ಅಜ್ಜಿ, ಅಣ್ಣ, ಅಕ್ಕ ಆದರಾಯಿತು ಬೇರೆ ಜಗತ್ತೇ ಬೇಕಾಗಿಲ್ಲ. ಬರುಬರುತ್ತಾ ಮಗು ದೊಡ್ಡದಾದಂತೆ ಇವರಿಂದ ಕ್ರಮೇಣ ದೂರವಾಗುವದು ಸಹಜ ಮತ್ತು ಪ್ರಕೃತಿ ನಿಯಮ.

ಹೈಸ್ಕೂಲು ಇಲ್ಲವೆ ಕಾಲೇಜು ಓದುತ್ತಿರುವ ಹುಡುಗ ಹುಡುಗಿಯರಿಗೆ ಓದು, ಕ್ರೀಡೆ ಅಥವಾ ತತ್ಸಂಬಂಧಿ ಹವ್ಯಾಸ ಮುಂತಾದವುಗಳೇ ಜೀವನದಲ್ಲಿ ಮಹತ್ವದವು. ಅವುಗಳನ್ನು ಪಡೆಯಲು, ಸಾಧಿಸಲು ಬೇರೆಲ್ಲ ವಿಷಯ, ವಿಚಾರ, ಸಂಬಂಧಗಳನ್ನು ದೂರವಾಗಿಸಿ ಜಂಗಿ ನಿಕಾಲಿ ಕುಸ್ತಿಯ ಪೈಲ್ವಾನರಂತೆ ಹೆಣಗುತ್ತಾರೆ. ಹೆಚ್ಚಿನ ಪಾಲು ಸಾಧಿಸುತ್ತಾರೆ. ಗೆದ್ದಾಗ ಕುಣಿದು ಕುಪ್ಪಳಿಸುತ್ತಾರೆ. ಸ್ವರ್ಗ ಮೂರೇ ಗೇಣು ಎನ್ನುವಂತೆ ಸಂತಸ ಪಡುತ್ತಾರೆ. ಇಲ್ಲವೇ ಕೆಲವೊಮ್ಮೆ ಸೋಲೊಪ್ಪಿಕೊಳ್ಳುತ್ತಾರೆ ಜಗತ್ತೇ ತಲೆ ಮೇಲೆ ಬಿದ್ದಂತೆ ನಿರಾಶರಾಗುತ್ತಾರೆ. ಇದೇ ತರಹದ ಕೆಚ್ಚು ಛಾತಿ ಎಲ್ಲಾ ಕಾಲದಲ್ಲಿಯೂ ಒಚಿದೇ ತರಹ ಇರುತ್ತದೆಯೇ?

ಹೈಸ್ಕೂಲು ಇಲ್ಲವೆ ಕಾಲೇಜು ಓದುತ್ತಿರುವ ಹುಡುಗ ಹುಡುಗಿಯರಿಗೆ ಓದು, ಕ್ರೀಡೆ ಅಥವಾ ತತ್ಸಂಬಂಧಿ ಹವ್ಯಾಸ ಮುಂತಾದವುಗಳೇ ಜೀವನದಲ್ಲಿ ಮಹತ್ವದವು. ಅವುಗಳನ್ನು ಪಡೆಯಲು, ಸಾಧಿಸಲು ಬೇರೆಲ್ಲ ವಿಷಯ, ವಿಚಾರ, ಸಂಬಂಧಗಳನ್ನು ದೂರವಾಗಿಸಿ ಜಂಗಿ ನಿಕಾಲಿ ಕುಸ್ತಿಯ ಪೈಲ್ವಾನರಂತೆ ಹೆಣಗುತ್ತಾರೆ. ಹೆಚ್ಚಿನ ಪಾಲು ಸಾಧಿಸುತ್ತಾರೆ. ಗೆದ್ದಾಗ ಕುಣಿದು ಕುಪ್ಪಳಿಸುತ್ತಾರೆ. ಸ್ವರ್ಗ ಮೂರೇ ಗೇಣು ಎನ್ನುವಂತೆ ಸಂತಸ ಪಡುತ್ತಾರೆ. ಇಲ್ಲವೇ ಕೆಲವೊಮ್ಮೆ ಸೋಲೊಪ್ಪಿಕೊಳ್ಳುತ್ತಾರೆ ಜಗತ್ತೇ ತಲೆ ಮೇಲೆ ಬಿದ್ದಂತೆ ನಿರಾಶರಾಗುತ್ತಾರೆ. ಇದೇ ತರಹದ ಕೆಚ್ಚು ಛಾತಿ ಎಲ್ಲಾ ಕಾಲದಲ್ಲಿಯೂ ಒಚಿದೇ ತರಹ ಇರುತ್ತದೆಯೇ?

ಪ್ರೀತಿಸುವ ಹುಡುಗ ಅಥವಾ ಹುಡುಗಿಗೆ ಸಂಗಾತಿಯೇ ಸರ್ವಸ್ವ. ಒಂದು ಕ್ಷಣವೂ ಅಗಲಿರಲಾರದ ಭಾವುಕತೆ. ವಿಷಯಗಳನ್ನು ಹುಡುಕಿ ಹುಡುಕಿ ಗಂಟೆಗಟ್ಟಲೇ ಮಾತನಾಡುತ್ತಾರೆ. ಪತ್ರ, ಫೋನು, ಈ-ಮೇಲು ಬಾರದೆ ಇದ್ದರೆ ಜಗತ್ತೇ ಮುಳುಗಿ ಹೋದ ಅನುಭವ. ಒಂದು ನಲುಮೆಯ ಮಾತಿಗೆ, ದೂರದ ಫೋನಿಗೆ, ಪ್ರೀತಿಯ ಮುತ್ತಿಗೆ, ಬರ್ತ್‌ಡೇ ಗ್ರೀಟಿಂಗ್ ಕಾರ್ಡಿಗೆ, ಭಾವನೆಗಳನ್ನು ಹೊತ್ತು ತರುವ ಪತ್ರಕ್ಕೆ, ಸಮಕ್ಷಮ ಭೇಟಿಗೆ ಅದೇನು ತಹತಹಿಕೆ, ಯಾತನೆ, ಕಾಯುವಿಕೆ ಅನುಭವಿಸಿದವರೇ ಬಲ್ಲರು. ಹೆತ್ತು ಹೊತ್ತು ಸಾಕಿದ ತಂದೆ ತಾಯಿಗಳು, ಹಲವಾರು ರೀತಿಯಲ್ಲಿ ಸಹಕರಿಸಿದ ಸಂಬಂಧಿಗಳು, ಹೊಗಳಿ-ಬೈದು ಬುದ್ಧಿ ಹೇಳಿದ ಹಿತೈಷಿಗಳು, ಸುಖ ದುಃಖಗಳಲ್ಲಿ ಸಹಭಾಗಿಯಾದ ಮಿತ್ರರು ಎಲ್ಲರೂ ಗೌಣ. ಪ್ರೀತಿಯ ಬಿಸಿ ತಣ್ಣಗಾಗುವವರೆಗೆ ಎಲ್ಲವೂ ಇದೆ ತರಹ. "ಪ್ಯಾರ್ ಕಿಯಾ ತೊ ಡರನಾ ಕ್ಯೊಂ" ಅನ್ನೋ ರೀತಿ. ಮನೆ ನಡೆಸುವ ಜವಾಬ್ದಾರಿ, ಮಕ್ಕಳನ್ನು ಸಾಕುವ ಜವಾಬ್ದಾರಿ ಶುರುವಾಗುವವರೆಗೆ ಇದರ ಮುಂದುವರಿಕೆ.

ಮದುವೆಯಾದ ಹೊಸದರಲ್ಲಿ ಗಂಡನಿಗೆ ಹೆಂಡತಿ ಅಥವಾ ಹೆಂಡತಿಗೆ ಗಂಡ ಜೀವ, ಜೀವನ, ಜಗತ್ತು ಎಲ್ಲಾ. ಒಬ್ಬರನ್ನೊಬ್ಬರು ಬಿಟ್ಟಿರಲಾರರು ಎನ್ನುವ ಅನಿವಾರ್ಯತೆ, ಅನ್ಯೋನ್ಯತೆ, ಅನುರಾಗ, ಆತ್ಮೀಯತೆ. ಕಾಲ ಕ್ರಮೇಣ ಇದೇ ಅನ್ಯೋನ್ಯತೆ ಇರುತ್ತದೆ ಎಂದು ಹೇಳಲು ಬಾರದು. ಮದುವೆಯ ಹೊಸದರಲ್ಲಿ ಗಂಡನಿಗೆ ಹೆಂಡತಿ ಮಾಡಿದ ಉಪ್ಪಿಲ್ಲದ ಉಪ್ಪಿಟ್ಟು ಅಪ್ಯಾಯಮಾನ. ಅರೆಬೆಂದ ಪಲ್ಲೆಯೂ ಅಮೃತಕ್ಕೆ ಸಮಾನ. ಹೊತ್ತಿದ ಚಪಾತಿಯೂ "ಇಟ್ಸ್ ಓಕೆ". ಮುಂದೆ ಹೆಂಡತಿ ಪಾಕಪ್ರವೀಣೆಯಾದರೂ "ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು" ಎಂಬಂತೆ ಏನಾದರೂ ಒಂದು ತಪ್ಪು ಕಾಣಸಿಗುತ್ತದೆ. ಬಯ್ಯಲು ಒಂದು ದಾರಿ ಸಿಗುವದೇ ತಡ ಬಾಯಿಗೆ ಬ್ರೇಕೇ ಇಲ್ಲ.
ಮದುವೆಯ ಆರಂಭದಲ್ಲಿ ಗಂಡ ತಂದ ಯಾವುದೇ ಉಡುಗೊರೆಯೂ ಅದೆಷ್ಟು ಇಷ್ಟ ಹೆಂಡತಿಗೆ. ಅದೆಷ್ಟು ಹೊಗಳುವದು, ಬೇರೆಯವರಲ್ಲಿ ಹೇಳಿಕೊಳ್ಳುವದು. ನನ್ನ ಗಂಡನಂಥವರು ಬೇರಾರಿಲ್ಲ ಎಂದು ಬೀಗುತ್ತಾಳೆ. ಕಾಲಕ್ರಮೇಣ ಗಂಡ, ಹೆಂಡತಿಯ ಎದುರು ರೇಷ್ಮೆ ಸೀರೆಗಳ ರಾಶಿ ಹಾಕಿದರೂ, ಬಂಗಾರದ ಅಂಗಡಿಯನ್ನೇ ತಂದು ಅಡುಗೆ ಮನೆಯಲ್ಲಿಟ್ಟರೂ "ನೀವೂ ಇದೀರ ದಂಡಕ್ಕೆ, ಏನೂ ಕೊಡಿಸುವದೇ ಇಲ್ಲ" ಎನ್ನುವ ತಗಾದೆಗಳಿಗೆ ಕೊರತೆಯೇನಿಲ್ಲ. ಈ ಮೂದಲಿಕೆಗಳಿಗೆ ಕೊನೆ ಮೊದಲಿಲ್ಲ.

ಇನ್ನು ವಾನಪ್ರಸ್ಥದ ಕಡೆ ಮುಖ ಮಾಡಿರುವ ವೃದ್ಧರಿಗೆ ಜಗತ್ತೇ ನೀರಸ, ಶೂನ್ಯ. ಕಾಲ ಕೆಟ್ಟು ಹೋಗುತ್ತಿದೆ ತಾವು ಚಿಕ್ಕವರಿದ್ದಾಗ ಕಾಲ ಎಷ್ಟು ಛುಲೋ ಇತ್ತು ಎನ್ನುವ ಹಳಹಳಿ. ತಮ್ಮವರೇ ತಮ್ಮನ್ನು ನೋಡಿಕೊಳ್ಳದಾದಾಗ "ಊರು ಹೋಗು ಅನ್ನುತ್ತೆ ಕಾಡು ಬಾ ಅನ್ನುತ್ತೆ" "ನಮ್ಮದೇನು ಬಿಡ್ರಿ ಇಂದು ಮನ್ಯಾಗ ನಾಳೆ ಕುಣ್ಯಾಗ" ಎನ್ನುತ್ತಾ ತಾವು ಇದುವರೆಗೆ ಬದುಕಿ ಬಾಳಿದ್ದೇ ಅಟ್ಟರ್ ವೇಸ್ಟು ಎನ್ನುವಂತೆ ಮಾತನಾಡುತ್ತಾರೆ. ತಮ್ಮೊಡನೆ ಬಾಳು ಸವೆಸಿದ, ಕಷ್ಟ ಸುಖಗಳಲ್ಲಿ ಸಹಭಾಗಿಗಳಾದ ಜೀವನ ಸಂಗಾತಿಗಳೇ ಹಳೆ ರದ್ದಿ ಪೇಪರುಗಳು!!!!!!!! ಕೆಲಸಕ್ಕೆ ಬಾರದ, ಊಟಕ್ಕೆ ದಂಡವಾದ, ಭೂಮಿಗೆ ಭಾರವಾದ ಜೀವಗಳು!!!!!!!!!

ಇದು ಹೀಗೇಕಾಗುತ್ತದೆ? ಎಲ್ಲರೂ ಇವನ್ನೆಲ್ಲಾ ಅನುಭವಿಸಲೇಬೇಕಾ? ಇದು ಅನಿವಾರ್ಯವೆ? ಅಂತ ನಾವೆಲ್ಲ ವಿಚಾರಿಸಿ ನೋಡಿದರೆ ಉತ್ತರ ನಮಗೇ ಹೊಳೆಯುತ್ತದೆ. ಜೀವನದ ಬೇರೆ ಬೇರೆ ಘಟ್ಟಗಳಲ್ಲಿ ನಮಗೆ ಪ್ರಿಯಾರಿಟಿಗಳು ಬದಲಾದಂತೆ ಸಂಬಂಧಗಳು ಸಹ ಬದಲಾಗುತ್ತವೆ. ಈ ಪ್ರಿಯಾರಿಟಿಗಳೆಂಬ ಜೇಡರ ಬಲೆಯಲ್ಲಿ ಸಿಲುಕಿದ ನಾವು-ನೀವು ಬದಲಾಗಲೇ ಬೇಕಾಗುವ ಅನಿವಾರ್‍ಯತೆಗೆ ಒಳಗಾಗುತ್ತೇವೆ. "ಸಣ್ಣಾಂವಿದ್ದಾಗ ಎಷ್ಟು ಶ್ಯಾಣ್ಯಾ ಇದ್ದ ಈಗ ನೋಡು ಹೆಂಗ ಆಗ್ಯಾನ" "ಯಾ ಹುಡುಗಿ ಹಿಂದ ಬಿದ್ದಾನೋ ಗೊತ್ತಿಲ್ಲಾ ಅಪ್ಪ ಬ್ಯಾಡಾ ಅವ್ವ ಬ್ಯಾಡಾ" "ತಾನು ತನ್ನ ಗಂಡ ಮಕ್ಕಳು ಆದರ ಆತು ಆಕಿಗೆ ಅತ್ತಿ ಮಾಂವ ಯಾಕ ಬೇಕು" "ಮೊದಲ ತಂದಿ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಅಂತಿದ್ದ ಈಗ ನೋಡ್ರಿ ಮದುವಿ ಆದಮ್ಯಾಲ ಹೆಂತಿ ಒಬ್ಬಾಕಿ ಆದ್ರ ಆತು ಜಗತ್ತ ಬ್ಯಾಡ" ಇತ್ಯಾದಿ ಇತ್ಯಾದಿ ಮಾತುಗಳನ್ನು ನಾವೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಯೇ ಇರುತ್ತೇವೆ ಇಲ್ಲವೆ ಕೇಳಲಿದ್ದೇವೆ!!!!!

ಜೀವನ ಅನ್ನೊದು ಹಗ್ಗದ ಮೇಲಿನ ನಡುಗೆಯ ಹಾಗೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಅಡಕೊತ್ತಿನಲ್ಲಿ ಸಿಕ್ಕ ಅಡಕೆಯ ಹಾಗೆ. ಜೀವನವೆಂಬ ರಥದ ಎರಡು ಗಾಲಿಗಳಾದ ಗಂಡ ಹೆಂಡರಿಗೆ ಎದುರಾಗುವ ಸಂದರ್ಭಗಳು, ಸಮಸ್ಯೆಗಳು "ಅತ್ತ ದರಿ ಇತ್ತ ಪುಲಿ" ಎನ್ನುವಂತಿರುತ್ತವೆ. ಎಲ್ಲವನ್ನು, ಎಲ್ಲರನ್ನು ಸಂಭಾಳಿಸಿಕೊಂಡು ಹೋಗಬೇಕು. ಇದು ಎಷ್ಟೊಂದು ಕಷ್ಟ ಅನ್ನೋದು ಅನುಭವಿಸಿದವರಿಗೇ ಗೊತ್ತು. ಹಾಗಾದರೆ ಈ ಹಾಳು ಸಂಸಾರವೇ ಸಾಕು ಎಂದು ಸಂಬಂಧಗಳಿಗೆಲ್ಲಾ ರಿಸೈನ್ ಮಾಡಿ ಸನ್ಯಾಸ ದೀಕ್ಷೆ ತೊಟ್ಟು ಹಿಮಾಲಯಕ್ಕೆ ಹೋಗಿ ಬಿಡುವದೇ ಸೂಕ್ತ ಎಂದು ಹಲವಾರು ಬಾರಿ ಅನ್ನಿಸುತ್ತಲ್ಲವೆ? ಆದರೆ ಉತ್ತರ ಅದಲ್ಲಾ. ಶರಣರು ಹೇಳಿದಂತೆ "ಸಂಗದೊಳಿದ್ದು ಸಾಧಿಸಬೇಕು" ದಾಸರು ಹೇಳಿದಂತೆ "ಈಸಬೇಕು ಇದ್ದು ಜಯಿಸಬೇಕು".

ಈ ಬದಲಾಗುವ ಪ್ರಿಯಾರಿಟಿಗಳ ಮತ್ತು ಸಂಬಂಧಗಳ ನಡುವೆ ಸತತವಾಗಿ ಹತ್ತಕ್ಕೂ ಹೆಚ್ಚು ವರ್ಷಗಳಷ್ಟು ನಾವು ಟಿಪಿ ಬಳಗದ ಸದಸ್ಯರು ನಡೆದುಕೊಂಡು ಬಂದಿರುವ ರೀತಿ ಒಂದು ಮಾದರಿಯೇ ಸರಿ. ಹಾಗೆಂದ ಮಾತ್ರಕ್ಕೆ ನಮ್ಮಲ್ಲಿ ಮನಸ್ತಾಪಗಳು, ಕಿತ್ತಾಟಗಳು, ಜಗಳಗಳು, ಝಟಾಪಟಿಗಳು ಆಗಿಯೇ ಇಲ್ಲ ಎಂದರೆ ತಪ್ಪಾದೀತು. ಆದರೆ ಅಂತಹ ಯಾವುದೇ ಸಂದರ್ಭದಲ್ಲಿ ನಾವೇ ಫಿರ್ಯಾದಿದಾರರು! ನಾವೇ ವಕೀಲರು!! ಮತ್ತು ನಾವೇ ನ್ಯಾಯಾಧೀಶರು!!! ನಾವು ಬಳಗ ಸ್ಥಾಪಿಸಿದಾಗ ಹೆಚ್ಚಿನವರು ಬ್ರಹ್ಮಚಾರಿಗಳೇ! ಈಗ ಬಳಗದಲ್ಲಿ ಇಬ್ಬರನ್ನುಳಿದು ಎಲ್ಲರೂ ಚತುರ್ಭುಜರೇ (ಮದುವೆಯಾದವರು)!! ಅಷ್ಟೇ ಏಕೆ ಬಹುಪಾಲು ಸದಸ್ಯರು ಡ್ಯಾಡಿ ಮಮ್ಮಿಗಳೇ!!! ನಾವೆಲ್ಲ ನಮ್ಮ ನಮ್ಮ ಸಂಸಾರ ಸಾಗರದಲ್ಲಿ ಸಿಗಿಬಿದ್ದಿದ್ದರೂ, ಬದಲಾದ ಪ್ರಿಯಾರಿಟಿಗಳ ಮತ್ತು ಸಂಬಂಧಗಳ ಮಧ್ಯೆ ಬದಲಾಗಿದ್ದರೂ ನಾವೆಲ್ಲ ಬದಲಾಗಿಲ್ಲ. ನಮ್ಮಲ್ಲಿನ ಒಗ್ಗಟ್ಟು, ಅಂತಃಸತ್ವ ಅಡಗಿಲ್ಲ. ಅದು ಶುಕ್ಲಪಕ್ಷದ ಚಂದಿರನಂತೆ ಬೆಳಗುತ್ತಲೇ ಇರಲಿ. ಇದನ್ನು ಹೀಗೆಯೆ ಮುಂದುವರೆಸಿಕೊಂಡು ಹೋಗೋಣ.

Sunday, October 22, 2006

ಅಮೇರಿಕಾ.. ಅಮೇರಿಕಾ ..! - ಭಾಗ-೧


ಅರುಣ ಆರ್. ಯಾದವಾಡ, ಜೆ.ಪಿ. ನಗರ ೯ನೇ ಹಂತ, ಬೆಂಗಳೂರು

ಚಿಕ್ಕಂದಿನಿಂದಲೂ ಬೆಳಗಾವಿ ಜಿಲ್ಹೆಯ ಯಮಕನಮರಡಿಯ ತಮ್ಮ ಅಜ್ಜನವರ ನ್ಯೂಜ್ ಪೇಪರ್ ಅಂಗಡಿಯಲ್ಲಿ ಸುಧಾ, ಪ್ರಜಾಮತ, ತರಂಗ, ವಿಜಯಚಿತ್ರ, ಲಂಕೇಶ್, ವನಿತಾ, ಚಂದಮಾಮ, ಮಯೂರ, ಮಲ್ಲಿಗೆ, ಪ್ರಪಂಚ, ಬಾಲಮಿತ್ರ, ಬೊಂಬೆಮನೆ ಇತ್ಯಾದಿಗಳ ನಡುವೆ ಬೆಳೆದ ಅರುಣ ಅವರಿಗೆ ಪತ್ರಿಕೆಗಳೆಂದರೆ ತುಂಬ ಹುಚ್ಚು. ಆ ಹುಚ್ಚು ಎಂಥದ್ದು ಅಂದರೆ ನಾಲ್ಕನೇ ತರಗತಿಯಲ್ಲಿದ್ದಾಗಲೇ ಪ್ರಜಾಮತದಲ್ಲಿ ಬರುತ್ತಿದ್ದ ‘ಪೌಲಸ್ತ್ಯನ ಪ್ರಣಯ ಕಥೆಗಳು’ ಎಂಬ ಧಾರಾವಾಹಿಯನ್ನು ಓದಿ ದೊಡ್ಡವರಿಂದ ಬೈಸಿಕೊಂಡದ್ದೂ ಇದೆ.. ! ಹೈಸ್ಕೂಲ್ ದಿನಗಳಿಂದಲೂ ಬರೆಯುವ ಹವ್ಯಾಸ ಇದೆ, ಆದರೆ ವೃತ್ತಿಪರ ಬರಹಗಾರರಲ್ಲ. ವೃತ್ತಿಯಿಂದ ಸಾಫ್ಟವೇರ್ ಎಂಜಿನಿಯರ್ ಆಗಿರುವ ಅರುಣ್, ಬೆಳಗಾವಿ ಜಿಲ್ಹೆಯ ಯರಗಟ್ಟಿಯಲ್ಲಿ ಹುಟ್ಟಿ, ಯಮಕನಮರಡಿಯಲ್ಲಿ ಹೈಸ್ಕೂಲ್‌ವರೆಗೆ ವಿದ್ಯಾಭ್ಯಾಸ, ಧಾರವಾಡದಲ್ಲಿ ಪಿಯುಸಿ, ಹುಬ್ಬಳ್ಳಿಯಲ್ಲಿ ಬಿ.ಇ. ಮುಗಿಸಿ, ಕೆಲ ವರ್ಷ ಮುಂಬೈಯಲ್ಲಿ ನೌಕರಿ ಮಾಡಿ ಇದೀಗ ತಮ್ಮ ಪತ್ನಿ ತೇಜಸ್ವಿನಿ, ಮಗಳು ಅನುಶ್ರೀ ಹಾಗೂ ಮಗ ಚಿರಾಗನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.



ಅಮೇರಿಕಾಕ್ಕೆ ಅಥವಾ ಯಾವುದೇ ವಿದೇಶಕ್ಕೆ ಹೋಗೋದು ಅಂದ್ರೆ ಯಾರೇ ಆಗಲಿ ಸ್ವಲ್ಪ ಸರಿಯಾಗಿ ಪ್ಲ್ಯಾನ್ ಮಾಡಿಕೊಂಡೇ ಹೋಗಬೇಕು. ಇಲ್ಲವಾದಲ್ಲಿ ಅನವಶ್ಯಕವಾಗಿ ತೊಂದರೆಗೆ ಈಡಾಗುವ ಸಾಧ್ಯತೆ ಇರುತ್ತದೆ.ಈಗ ಮೊದಲಿನ ಹಾಗೇ ಇಲ್ಲ.ಎಲ್ಲಾ ಮಾಹಿತಿ ಇಂಟರ್ನೆಟ್‍ನಲ್ಲಿ ಲಬ್ಯವಿದೆ. ಆದರೆ ನಾನು ಗಮನಿಸಿದ ಸಂಗತಿ ಏನೆಂದರೆ, ನಮ್ಮ ಕನ್ನಡ ಬಾಷೆಯಲ್ಲಿ ಸಾಕಷ್ಟು ಮಾಹಿತಿಯಿಲ್ಲ. ಆ ದಿಸೆಯಲ್ಲಿ ನಮ್ಮ ಜನರಿಗೆ ಈ ಕನ್ನಡದಲ್ಲೇ ಮಾಹಿತಿ ನೀಡಲು ಇದು ನಮ್ಮ ಒಂದು ಪುಟ್ಟ ಪ್ರಯತ್ನ.


ನೀವು ಅಮೇರಿಕೆಗೆ ಮೊದಲ ಬಾರಿಗೆ ಪ್ರವಾಸ ಮಾಡುತ್ತಿದ್ದರೆ, ನಿಮ್ಮ ಸಿದ್ಧತೆಗೆ ಹಲವಾರು ಹಂತಗಳಿವೆ.
ಈ ಲೇಖನದಲ್ಲಿ ಮೊದಲಿಗೆ ಹೋಗುವ ಮೊದಲು ಏನೇನು ಸಾಮಾನು-ಸರಂಜಾಮು ತೆಗೆದುಕೊಳ್ಳಬೇಕು, ಸೂಕ್ತ ಸೂಚನೆಗಳು ಹಾಗೂ ಏನೇನು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಒಂದು ಪಟ್ಟಿ ಇಲ್ಲಿದೆ.

ಮೊದಲಿಗೆ ನೀವು ತೆಗೆದಿಟ್ಟುಕೊಳ್ಳಬೇಕಾದ/ಖರೀದಿ ಮಾಡಬೇಕಾದ ವಸ್ತುಗಳ ಪಟ್ಟಿ:

ದಾಖಲೆಗಳು:
೧.ಪಾಸ್‍ಪೋರ್ಟ್
೨.ವೀಸಾ ದಾಖಲೆಗಳು
೩.ಏರ್ ಟಿಕೇಟ್‍ಗಳು (ಹೋಗುವ ಮತ್ತು ಬರುವ ಪ್ರಯಾಣಕ್ಕೆ. ಬರುವ ಪ್ರಯಾಣಕ್ಕೆ ಟಿಕೇಟ್‍ಗಳನ್ನು ಕೆಲವೊಮ್ಮೆ ನಂತರವೂ ಬುಕ್ ಮಾಡಬಹುದು.)
೪.ಇನ್ಸುರೆನ್ಸ್ ದಾಖಲೆಗಳು
೫.ಟ್ರಾವೆಲರ್ಸ್ ಚೆಕ್ಕುಗಳು
೬.ಖರ್ಚಿಗೆ ಡಾಲರ್ ಹಣ
೭.ಏರ್‍ಪೋರ್ಟ್ನಲ್ಲಿ ಅಗತ್ಯಕ್ಕೆ ಸ್ವಲ್ಪ ಹಣ (ರೂಪಾಯಿಗಳಲ್ಲಿ)
೮.ಇಂಟರ್‍ನ್ಯಾಶನಲ್ ಕ್ರೆಡಿಟ್ /ಡೆಬಿಟ್ ಕಾರ್ಡ್‍ಗಳು (ನೀವು ಉದ್ಯೋಗಿಯಾಗಿದ್ದರೆ)
೯.ನಿಮ್ಮ ಕಂಪನಿಯ ಇನ್ನಿತರ ಮುಖ್ಯ ದಾಖಲೆಗಳು


ಬಟ್ಟೆ/ಬರೆ:
೧. ಆಫೀಸಿನಲ್ಲಿ ಧರಿಸುವ ಫಾರ್ಮಲ್ ಬಟ್ಟೆಗಳು (೫-೬ ಜೊತೆ)
೨. ಹೊರಗೆ ಅಡ್ಡಾಡವಾಗ ಧರಿಸುವ ಬಟ್ಟೆ ಬರೆ (೩-೪ ಜೊತೆ)
೩. ಮನೆಯಲ್ಲಿ ಇರುವಾಗ ಧರಿಸುವ ಬಟ್ಟೆಗಳು (೩-೪ ಜೊತೆ)
೪. ಒಳ ವಸ್ತ್ರಗಳು (೫-೬ ಜೊತೆ)
೫. ಚಳಿಗಾಲದ ಬಟ್ಟೆಗಳು (ಸ್ವೆಟರ್/ಜರ್ಕಿನ್/ಹ್ಯಾಂಡ್ ಗ್ಲೌಸ್‍ಗಳು/ಥರ್ಮಲ್ ಬಟ್ಟೆಗಳು/ಓವರ್ ಕೋಟ್/ಕ್ಯಾಪ್ ಇತ್ಯಾದಿ)
೬. ಚರ್ಮದ ಶೂಗಳು/ಸಾಕ್ಸ್ (ಆಫೀಸಿಗಾಗಿ)
೭. ಸ್ಪೋರ್ಟ್ಸ್ ಶೂಗಳು/ಸಾಕ್ಸ್(ಮಹಿಳೆಯರು, ಪುರುಷರು ಯಾರೇ ಆಗಲಿ, ಮನೆಯಲ್ಲೇ ಇರಲಿ/ಆಫೀಸಿಗೆ ಹೋಗುತ್ತಿರಲಿ ಒಂದು ಜೊತೆ ಸ್ಪೊರ್ಟ್ಸ್ ಶೂಗಳು ಇರಲೇಬೇಕು.)
೮. ಚಪ್ಪಲಿಗಳು (೧ ಜೊತೆ)
೯. ನಿಮ್ಮ ಚಿಕ್ಕ ಮಕ್ಕಳ ಎಲ್ಲಾ ಬಟ್ಟೆ ಬರೆ (ಅಲ್ಲಿ ತುಂಬಾ ದುಬಾರಿ ಇರುತ್ತವೆ. ಯಾವುದನ್ನು ಬಿಟ್ಟು ಹೋಗಬೇದಿ. ಅಲ್ಲದೇ ಅಲ್ಲಿ ಸಿಗುವ ಬಟ್ಟೆ ಇಲ್ಲೇ ನಮ್ಮ ದೇಶದಿಂದಲೇ ರಫ್ತಾಗಿರುತ್ತವೆ..!)


ನಿಮ್ಮ ಒಟ್ಟು ಲಗ್ಗೇಜುಗಳು:
ನಾವು ಯಾವುದೇ ವೀಸಾದ ಮೂಲಕ ಪ್ರಯಾಣಿಸುತ್ತಿರಲಿ, ತಲಾ ಒಬ್ಬರಿಗೆ ೮ ಕೆ.ಜಿ. ಹ್ಯಾಂಡ್ ಬ್ಯಾಗೇಜ್ ಹಾಗೂ ೨೩ ಕೆ.ಜಿ.ಯ ೨ ದೊಡ್ಡ ಲಗ್ಗೇಜ್‍ಗಳಂತೆ (ಮುಖ್ಯ ಬ್ಯಾಗೇಜ್) ತೆಗೆದುಕೊಂಡು ಹೋಗಬಹುದು.ಆದರೆ ಹೊರಡುವ ಮುಂಚೆ ನೀವು ಪ್ರಯಾಣಿಸುತ್ತಿರುವ ವಿಮಾನದ ಮಾಹಿತಿ ಕೇಂದ್ರವನ್ನು ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ , ಅಥವಾ ಅವರ ವೆಬ್‍ಸೈಟ್‍ನ್ನು ನೋಡಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವದು ಒಳಿತು. ಹ್ಯಾಂಡ್ ಬ್ಯಾಗ್ಗೇಜ್ ಪ್ರಯಾಣದ ಸಮಯದಲ್ಲಿ ಯಾವಾಗಲೂ ನಿಮ್ಮ ಹತ್ತಿರವೇ ಇರುತ್ತದೆ. ಆದ್ದರಿಂದ ಅದರಲ್ಲಿ ನಿಮಗೆ ಬೇಕಾದ ಅತ್ಯಂತ ಅತ್ಯಗತ್ಯ ವಸ್ತುಗಳನ್ನು ಇಟ್ಟುಕೊಳ್ಳಿ.

ಅ.ಪಾಸ್‍ಪೋರ್ಟ್
ಆ.ಏರ್ ಟಿಕೇಟ್‍ಗಳು
ಇ. ಪೆನ್
ಈ.ನಿಮ್ಮ ಮುಖ್ಯ ದಾಖಲೆಗಳು, ಆಭರಣಗಳು
ಉ.ನೀವು ತಲುಪಲಿರುವ ಸ್ಥಳದ ಸಂಪೂರ್ಣ ವಿಳಾಸ ಹಾಗೂ ಫೋನ್ ನಂಬರ್‍ಗಳ ಪಟ್ಟಿ
(ಈ ಪಟ್ಟಿಯಲ್ಲಿ ಅಮೇರಿಕೆಯಲ್ಲಿರುವ ನಿಮ್ಮ ಎಲ್ಲಾ ಪರಿಚಯದವರ ಹಾಗೂ ಮಿತ್ರರ ನಂಬರ್‍ಗಳನ್ನು ಬರೆದಿಟ್ಟುಕೊಳ್ಳಿ.)
ಊ. ಮೊಬೈಲ್ ಫೋನ್ (ಸ್ವಿಚ್‍ ಆಫ್ ಆದ ಸ್ಥಿತಿಯಲ್ಲಿ)
ಋ. ಲ್ಯಾಪ್‍ಟಾಪ್ (ಸ್ವಿಚ್‍ ಆಫ್ ಆದ ಸ್ಥಿತಿಯಲ್ಲಿ) ನಿಮ್ಮ ಹತ್ತಿರ ಇದಲ್ಲದೇ ಒಂದು ಚಿಕ್ಕ ಪಾಸ್‍ಪೋರ್ಟ್/ಹಣದ ಪೌಚ್ (ಪುರುಷರಿಗೆ) ಅಥವಾ ವ್ಯಾನಿಟಿ ಬ್ಯಾಗ್(ಮಹಿಳೆಯರಿಗೆ) ಇರಲಿ. ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಮಾಡುವಾಗ ಕೆಲವು ಏರ್‍ಲೈನ್ಸ್ ಸಂಸ್ಥೆಯವರು ಕ್ಯಾಬಿನಿನಲ್ಲಿ ಒಂದೇ ಬ್ಯಾಗ್‍ಗೆ ಅನುಮತಿ ಕೊಡುತ್ತಾರೆ. ಅಂಥ ಸಮಯದಲ್ಲಿ ಈ ಬ್ಯಾಗನ್ನು ಹ್ಯಾಂಡಬ್ಯಾಗಿನಲ್ಲೇ ಹಾಕಿ , ಒಂದೇ ಬ್ಯಾಗು ಅಂತಾ ತೋರಿಸಿ. ವಿಮಾನದ ಒಳಗೆ ಹತ್ತಿದ ನಂತರ ಈ ಪಾಸ್‍ಪೋರ್ಟ್/ಹಣದ ಪೌಚ್ ಅಥವಾ ವ್ಯಾನಿಟಿ ಬ್ಯಾಗ್‍ನ್ನು ನಿಮ್ಮ ಹತ್ತಿರವೇ ಯಾವಾಗಲೂ ಭದ್ರವಾಗಿ ಇಟ್ಟುಕೊಳ್ಳಿ. ಟಾಯಲೆಟ್‍ಗೆ ಹೋಗುವಾಗಲೂ ತೆಗೆದುಕೊಂಡೇ ಹೋಗಿ. ಮತ್ತು ನಿಮ್ಮ ಹ್ಯಾಂಡ್ ಬ್ಯಾಗೇಜ್‍ನ್ನು ನಿಮ್ಮ ಸೀಟಿನ ಮೇಲೆ ಇರುವ ಲಗ್ಗೇಜ್ ಬಾಕ್ಸಗಳಲ್ಲಿ ಇಡಿ. ಒಂದು ಬಾಕ್ಸನಲ್ಲಿ ಸುಮಾರು ೧೦ರಿಂದ ೧೨ ಕೆ.ಜಿ ಯ ಒಟ್ಟು ೪ ಬ್ಯಾಗೇಜಗಳನ್ನು ಇಡಬಹುದು.


ಲಗ್ಗೇಜ್ ಪ್ಯಾಕ್ ಮಾಡುವ ರೀತಿ:
ನೀವು ತಲುಪಲಿರುವ ಸ್ಥಳದ ಸಂಪೂರ್ಣ ವಿಳಾಸದ ಕಂಪ್ಯೂಟ‍ರ್ ಪ್ರಿಂಟ್‍ಔಟ್‍ಗಳ ೫-೬ ಕಾಪಿಗಳನ್ನು ತೆಗೆದುಕೊಂಡು, ಮುಖ್ಯ ಬ್ಯಾಗೇಜ್‍ನ ಎಲ್ಲ ಬ್ಯಾಗ್‍ಗಳ ಒಳಗಡೆ ಹಾಗು ಹೊರಗಡೆ ಅಂಟಿಸಿ.ಈ ತರಹ ಲೇಬಲ್‍ಗಳನ್ನು ಅಂಟಿಸುವದರಿಂದ ಮುಖ್ಯವಾಗಿ ನೀವು ಏರ್‍ಪೋರ್ಟ್‍ನಲ್ಲಿ ಇಳಿದ ನಂತರ ನಿಮ್ಮ ಲಗ್ಗೇಜ್ ಗುರ್ತಿಸುವಲ್ಲಿ ಸಹಾಯವಾಗುತ್ತದೆ. ಯಾಕೆಂದರೆ ಕೆಲವೊಂದು ಸಲ ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಎಷ್ಟೋ ಪ್ರಯಾಣಿಕರ ಲಗ್ಗೇಜ್ ನೋಡಲು ಒಂದೇ ಬಣ್ಣದವು, ಸೈಜಿನವು ಇರುತ್ತವೆ. ಅಲ್ಲದೇ ನಿಮ್ಮ ಲಗ್ಗೇಜ್ ಅಲ್ಲಿಗೆ ತಲುಪಿರದೇ ಇದ್ದಲ್ಲಿ, ನಿಮ್ಮ ಏರ್‍ಲೈನ್ ಸಂಸ್ಥೆಗೆ ಅದನ್ನು ಬೇಗನೆ ಹುಡುಕಿ ನಿಮಗೆ ತಲುಪಿಸಲು ಸಹಾಯವಾಗುತ್ತದೆ.


(ಮುಂದುವರೆಯುತ್ತದೆ...)